ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೋಲ್ಕತ್ತಾದಲ್ಲಿ ಕುತ್ತಿಗೆ ಸೆಳೆತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಭಾರತ ಟೆಸ್ಟ್ ನಾಯಕ ಶುಭಮನ್ ಗಿಲ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ, ಶನಿವಾರ ಗುವಾಹಟಿಯಲ್ಲಿ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅವರು ಲಭ್ಯವಿದ್ದಾರಾ ಎಂಬುದು ಸದ್ಯ ಪ್ರಶ್ನೆಯಲ್ಲಿದೆ
ಮಂಗಳವಾರ ಬೆಳಿಗ್ಗೆ ಭಾರತ ಕೋಲ್ಕತ್ತಾದಲ್ಲಿ ತರಬೇತಿ ಅವಧಿಯನ್ನು ಶುರುಮಾಡಿದೆ. ಆದರೆ ಗಿಲ್ ಅದರಲ್ಲಿ ಭಾಗವಹಿಸುವ ನಿರೀಕ್ಷೆಯಿಲ್ಲ. ತಂಡವು ಬುಧವಾರ ಗುವಾಹಟಿಗೆ ಹಾರುವ ನಿರೀಕ್ಷೆಯಿದ್ದು, ಕುತ್ತಿಗೆ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಗಿಲ್ ತಂಡದೊಂದಿಗೆ ಪ್ರಯಾಣಿಸುವುದು ಅನುಮಾನವಾಗಿದೆ.
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಕೋಚ್ ಗೌತಮ್ ಗಂಭೀರ್, " ಗಿಲ್ ಬಗ್ಗೆ ಇನ್ನೂ ಮೌಲ್ಯಮಾಪನ ಮಾಡಲಾಗುತ್ತಿದೆ" ಎಂದು ಹೇಳಿದರು. ಶೀಘ್ರದಲ್ಲೇ ಫಿಸಿಯೋ ಮತ್ತು ಅವರ ತಂಡವು ಮತ್ತೊಂದು ಮೌಲ್ಯಮಾಪನವನ್ನು ನಡೆಸಲಿದೆ. ನಾಲ್ಕನೇ ಇನ್ನಿಂಗ್ಸ್ನಲ್ಲಿ ಗಿಲ್ ಅನುಪಸ್ಥಿತಿಯು ಭಾರತವನ್ನು ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ 30 ರನ್ಗಳ ಸೋಲಿನಲ್ಲಿ ಸಿಲುಕಿಸುವಂತೆ ಮಾಡಿತು.
ಮುಂದಿನ ಟೆಸ್ಟ್ಗೆ ಗಿಲ್ ಲಭ್ಯವಿಲ್ಲದಿದ್ದರೆ, ಸಂಭಾವ್ಯ ಬದಲಿ ಆಟಗಾರರು ಎಡಗೈ ಬ್ಯಾಟ್ಸ್ಮನ್ಗಳಾದ ಬಿ ಸಾಯಿ ಸುದರ್ಶನ್ ಮತ್ತು ದೇವದತ್ ಪಡಿಕ್ಕಲ್. ದೆಹಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸುದರ್ಶನ್ 87 ಮತ್ತು 39 ರನ್ ಗಳಿಸಿದರು. ಆದರೆ ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ಪರ ನಾಲ್ಕು ಇನ್ನಿಂಗ್ಸ್ಗಳಲ್ಲಿ 32 ರನ್ ಗಳಿಸಿದರು. ಬಾರ್ಡರ್-ಗವಾಸ್ಕರ್ ಟ್ರೋಫಿ ಮತ್ತು ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ತಲಾ ಒಂದು ಟೆಸ್ಟ್ ಆಡಿದ ಪಡಿಕ್ಕಲ್, ದಕ್ಷಿಣ ಆಫ್ರಿಕಾ ಎ ವಿರುದ್ಧ ಮೂರು ಒಂದೇ ಅಂಕಿಯ ಸ್ಕೋರ್ಗಳು ಮತ್ತು 24 ರನ್ಗಳನ್ನು ಗಳಿಸಿದರು.









