)
ದ್ವೀಪ ರಾಷ್ಟ್ರವಾದ ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು ದೊಡ್ಡ ಮಟ್ಟದಲ್ಲಿ ಸಾವು- ನೋವುಗಳನ್ನು ಉಂಟು ಮಾಡುತ್ತಿದೆ. ದೇಶದ್ಯಾಂತ ಒಟ್ಟು 120 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದ್ದು ಈ ಸಂಬಂಧ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ಭೀಕರ ದಿತ್ವಾ ಚಂಡಮಾರುತದ ಹೊಡೆತಕ್ಕೆ ಶ್ರೀಲಂಕಾ ಅಕ್ಷರಶಃ ನಲುಗಿ ಹೋಗಿದೆ. ಈವರೆಗೆ 120 ಮಂದಿ ಜೀವ ಕಳೆದುಕೊಡಿದ್ದಾರೆ ಎನ್ನಲಾಗಿದ್ದು ಸಾಕಷ್ಟು ಜನ ಕಣ್ಮರೆಯಾಗಿದ್ದಾರೆ. ಮಾಹಿತಿ ಪ್ರಕಾರ 130 ಜನರು ಕಣ್ಮರೆಯಾಗಿದ್ದಾರೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಎಲ್ಲೆಂದರಲ್ಲಿ ನೀರು ನಿಂತಿದ್ದು ಸಂಪರ್ಕಕ್ಕೂ ತೀವ್ರ ಸಮಸ್ಯೆ ಆಗಿದೆ. ಆದರೂ ಪೊಲೀಸರು, ರಕ್ಷಣಾ ಪಡೆಗಳು ಕಾರ್ಯಾಚರಣೆ ಮಾಡುತ್ತಿದ್ದು ಹಲವರನ್ನು ರಕ್ಷಣೆ ಮಾಡಿವೆ. ಅಲ್ಲದೇ ಸಾಕು ಪ್ರಾಣಿಗಳನ್ನು ಕೆಲವೆಡೆ ರಕ್ಷಣೆ ಮಾಡಿರುವುದು ಕಂಡು ಬಂದಿದೆ.
ಕೆಲವೊಂದು ಕಟ್ಟಡಗಳಿಗಳು ಹಾನಿಗೊಂಡಿವೆ. ವಿದ್ಯುತ್, ರಸ್ತೆ ಸಂಪರ್ಕ ಸೇರಿದಂತೆ ನಿತ್ಯದ ಮೂಲಸೌಕರ್ಯಗಳಿಗೆ ಬಹಳಷ್ಟು ಸಮಸ್ಯೆಯಾಗಿದ್ದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆಗಳು, ಸೇತುವೆಗಳು ಮುಳುಗಡೆಯಾಗಿವೆ. ರೈಲ್ವೆ ಹಳಿಗಳು ಕೂಡ ನೀರಿನಲ್ಲಿ ಮುಳುಗಿವೆ. ರೈತರು ಬೆಳೆದಂತಹ ವಿವಿಧ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ಹೇಳಲಾಗುತ್ತಿದೆ.
ದೇಶದ್ಯಾಂತ ದಿತ್ವಾ ಸೈಕ್ಲೋನ್ ಅಬ್ಬರಿಸುತ್ತಿರುವ ಕಾರಣ ಜನರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಕೂಡಲೇ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕು ಎಂದು ಸರ್ವಪಕ್ಷಗಳ ಸಭೆಯಲ್ಲಿ, ವಿರೋಧ ಪಕ್ಷಗಳ ನಾಯಕರು ಪಟ್ಟು ಹಿಡಿದಿದ್ದರು. ಇದರಿಂದ ಎಲ್ಲರೊಂದಿಗೆ ಅಂತಿಮವಾಗಿ ಚರ್ಚೆ ಮಾಡಿ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಇದಕ್ಕೂ ಮೊದಲು ಅಲ್ಲಿನ ವೈದ್ಯರ ಸಂಘವು ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು ಅಗತ್ಯವಿದೆ ಎಂದು ಅಧ್ಯಕ್ಷರಿಗೆ ಪತ್ರ ಬರೆದಿತ್ತು ಎಂದು ಹೇಳಲಾಗಿದೆ.
ಸದ್ಯ ದಿತ್ವಾ ಚಂಡಮಾರುತವು ಶ್ರೀಲಂಕಾವನ್ನು ತೊರೆದು ಭಾರತದೆಡೆಗೆ ಬರುತ್ತಿದೆ. ದಕ್ಷಿಣ ಭಾರತದ ಕರಾವಳಿ ಭಾಗದ ಕಡೆಗೆ ಮುನ್ನುಗ್ಗುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರ್ನಾಟದಕ ಕರಾವಳಿ ಭಾಗ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ದಕ್ಷಿಣದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹೇಳಲಾಗುತ್ತಿದೆ.