ಬೆಂಗಳೂರು: ರಾಜ್ಯ ಚುನಾವಣೆಯಲ್ಲಿ ಭಾರೀ ಸಂಚಲನ ಮೂಡಿಸಿರುವ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಪ್ರಚಾರ ಮಾಡಲು ನಟ ಕಿಚ್ಚ ಸುದೀಪ್ ಒಪ್ಪಿದ್ದಾರೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ಶ್ರೀರಾಮುಲು ಪರ ಜನಾರ್ಧನ ರೆಡ್ಡಿ ಪ್ರಚಾರಕ್ಕಿಳಿದು ಶ್ರೀರಾಮುಲುವನ್ನು ಶತಾಯಗತಾಯ ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿರುವ ಬೆನ್ನಲೇ, ಸಿದ್ದರಾಮಯ್ಯ ಪರ ಕಿಚ್ಚ ಸುದೀಪ್ ಪ್ರಚಾರ ಮಾಡಲಿದ್ದಾರೆ. ಇದೇ ಮೇ 9 ರಂದು ಬಾದಾಮಿಗೆ ತೆರಳಿ ಸಿದ್ದರಾಮಯ್ಯ ಸುದೀಪ್ ಮತ ಯಾಚನೆ ಮಾಡಲಿದ್ದಾರೆ. 


ಸುದೀಪ್ ಸಹ, ತಾವು ಯಾವುದೇ ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ. ವ್ಯಕ್ತಿಯ ಪರ ಪ್ರಚಾರ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದಾಗಿ ಪ್ರಚಾರ ನಡೆಸಲು ಮುಂದಾಗಿರುವುದಾಗಿ ಹೇಳಿರುವ ಸುದೀಪ್, ತಾವು ಹಣಕ್ಕಾಗಿಯಾಗಲೀ ಅಥವಾ ಇತರ ಯಾವುದೇ ಉದ್ದೇಶಗಳಿಗಾಗಿ ಪ್ರಚಾರ ನಡೆಸಲು ಒಪ್ಪಿಕೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. 


ಈ ಹಿಂದೆ ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಂದಲ್ಲಾ ಒಂದು ವಿಚಾರಗಳಿಗೆ ಭೇಟಿ ಮಾಡುತ್ತಿದ್ದ ಸುದೀಪ್, ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಪೂರಕವೆಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ತಾವು ಸುದೀಪ್ ಅವರಿಗೆ ಚುನಾವಣಾ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದು, ಅಭಿಪ್ರಾಯ ಹೇಳಲು ಕಾಲಾವಕಾಶ ನೀಡಿದ್ದಾಗಿ ಹೇಳಿದ್ದರು. ಆದರೆ ಇದೀಗ ಆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. ಮೇ 9ರಂದು ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ಮಾಡುವುದಾಗಿ ಸ್ವತಃ ಸುದೀಪ್ ಅವರೇ ಹೇಳಿದ್ದಾರೆ.