ಸೋಲಿನ ಭಯದಿಂದ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಎಂದ ಮೋದಿಗೆ ತಿರುಗೇಟು ನೀಡಿದ ಸಿದ್ದು
ನೀವು 56 ಇಂಚು ಎದೆಯ ವ್ಯಕ್ತಿಯಾಗಿರಬಹುದು, ಆದರೆ ಇದಕ್ಕೆ ಸರಿಯಾಗಿ ವಿವರಣೆ ನೀಡಿ- ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ ಸಿಎಂ ಸಿದ್ದರಾಮಯ್ಯ.
ಗದಗ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಯಾವಾಗಲೋ ಒಮ್ಮೊಮ್ಮೆ ಎಚ್ಚರದಲ್ಲಿರುವ, ಅತೀ ಹೆಚ್ಚು ಸಮಯವನ್ನು ನಿದ್ದೆಯಲ್ಲಿಯೇ ಕಳೆಯುವ ಮುಖ್ಯಮಂತ್ರಿಗಳು, ತಾವು ಸೋಲುವದಲ್ಲದೇ, ತಮ್ಮ ಮಗನನ್ನು ಕೂಡಾ ಬಲಿ ಕೊಡುತ್ತಿದ್ದಾರೆ. ತಾವು ಎರಡು ಕ್ಷೇತ್ರದಲ್ಲಿ ಹಾಗೂ ತಮ್ಮ ಮಗನ ಒಂದು ಕ್ಷೇತ್ರದಲ್ಲಿ ಸೋಲುವುದು ನಿಶ್ಚಿತ ಎಂದು ಲೇವಡಿ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ, 'ನೀವೂ ಎರಡು ಸಂಸದೀಯ ಕ್ಷೇತ್ರಗಳಿಂದ ಸ್ಪರ್ಧಿಸಿರಲಿಲ್ಲವೇ. ಸೋಲಿನ ಭಯದಿಂದ ವಾರಣಾಸಿ ಹಾಗೂ ವಡೋದರದಲ್ಲಿ ಸ್ಪರ್ಧಿಸಿದ್ದಿರೆ? ನೀವು 56 ಇಂಚು ಎದೆಯ ವ್ಯಕ್ತಿಯಾಗಿರಬಹುದು, ಆದರೆ ಇದಕ್ಕೆ ಸರಿಯಾಗಿ ವಿವರಣೆ ನೀಡಿ ಎಂದು ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಅಲ್ಲದೆ, ಎರಡು ಕ್ಷೇತ್ರದ ಸ್ಪರ್ಧೆ ವಿಚಾರ ಬಿಡಿ. ಬಿಜೆಪಿ 60-70ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಆ ಬಗ್ಗೆ ಚಿಂತಿಸಿ ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸಿನ ಕುಟುಂಬ ರಾಜಕಾರಣ ತಾಂಡವವಾಡುತ್ತಿದೆ. ಮುಖ್ಯಮಂತ್ರಿಗಳಿಗೆ 2 +1 ಫಾರ್ಮುಲಾ ಇದ್ರೆ, ಇತರೆ ಮಂತ್ರಿಗಳು 1 + 1 ಫಾರ್ಮುಲದಡಿ ಅವರಿಗೆ ಅವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ ಎಂದು ಟೀಕಿಸಿರುವ ನರೇಂದ್ರ ಮೋದಿ ಅವರಿಗೆ ಮತ್ತೊಂದು ಟ್ವೀಟ್ ಮೂಲಕ ಟಾಂಗ್ ನೀಡಿರುವ ಸಿದ್ದರಾಮಯ್ಯ, 'ನನ್ನ ಬಗ್ಗೆ ನನಗೆ ಗೊತ್ತಿಲ್ಲ ಆದರೆ ನೀವು 2 + 1 ಸೂತ್ರವನ್ನು ಹೊಂದಿದ್ದೀರಿ ಪಿಎಂ ಸರ್' ಎಂದು #2Reddy1Yeddy ಹ್ಯಾಷ್ ಟ್ಯಾಗ್ ಹಾಕುವ ಮೂಲಕ ಟಾಂಗ್ ನೀಡಿದ್ದಾರೆ.