India security is at risk : ಇತ್ತೀಚಿನ ದಿನಗಳಲ್ಲಿ ಅದಾನಿ ಸಮೂಹ ಕಂಡ ಕುಸಿತ ಸಾಕಷ್ಟು ಹೂಡಿಕೆದಾರರು ಮತ್ತು ನಾಗರಿಕರನ್ನು ಆಘಾತಕ್ಕೀಡು ಮಾಡಿದೆ. ಮಾಹಿತಿಗಳ ಪ್ರಕಾರ, ಹಿಂಡನ್‌ಬರ್ಗ್ ಎಂಬ ಶಾರ್ಟ್ ಸೆಲ್ಲರ್ ಸಂಸ್ಥೆ ಅದಾನಿ ಸಮೂಹದ ಮೇಲೆ ನಡೆಸಿದ ಆರೋಪ, ಜಾಗತಿಕ ಹೂಡಿಕೆಯ ಸೂಕ್ತ ತಾಣ ಎಂಬ ಭಾರತದ ನಂಬಿಕಾರ್ಹತೆಯ ಮೇಲೆ ಜಾಗತಿಕ ಹೂಡಿಕೆದಾರರು ಹೆಚ್ಚಿನ ಪ್ರಶ್ನೆಗಳು, ಕಾರ್ಮೋಡಗಳು ಮೂಡಿಸುವಂತೆ ಮಾಡಿದೆ. ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿಯ ಮೇಲೆ ಅಮೆರಿಕದ ಸಣ್ಣ ಹೂಡಿಕೆದಾರ ಸಂಸ್ಥೆ ಹಿಂಡನ್‌ಬರ್ಗ್ ವಂಚನೆ ಮತ್ತು ಷೇರುಗಳ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಿದ ಆರೋಪ ಮಾಡಿದೆ. ಇದು ಭಾರತದ ಆರ್ಥಿಕತೆಯಲ್ಲಿ ಅಪಾರ ಪ್ರಮಾಣದ ಕೋಲಾಹಲ ಎದುರಾಗುವಂತೆ ಮಾಡಿದೆ. ಈ ಆರೋಪ ಮತ್ತು ಅದಾನಿ ಸಮೂಹದ ಕುಸಿತ ಹೂಡಿಕೆದಾರರಲ್ಲಿ ಭಾರತೀಯ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಲು ಅಪನಂಬಿಕೆ ಉಂಟಾಗುವಂತೆ ಮಾಡಿದೆ. ಅದಾನಿ ಸಮೂಹ ತನ್ನ ಷೇರುಗಳು ಮತ್ತು ಬಾಂಡ್‌ಗಳು ಪಾತಾಳಕ್ಕೆ ಕುಸಿಯದಂತೆ ಶತ ಪ್ರಯತ್ನ ಮಾಡುತ್ತಿದ್ದರೂ, ಹಿಂಡನ್‌ಬರ್ಗ್ ಸಂಸ್ಥೆ ಭಾರತೀಯ ಆರ್ಥಿಕತೆಯಲ್ಲಿ ಕೋಲಾಹಲ ಉಂಟಾಗುವಂತೆ ಮಾಡಿರುವುದು ಸುಳ್ಳಲ್ಲ. ಇದು ಎಲ್ಲ ಭಾರತೀಯ ಕಂಪನಿಗಳ ಬಗ್ಗೆ ಅಪನಂಬಿಕೆ ಮೂಡುವಂತೆ ಮಾಡಿದ್ದು, ಭಾರತ ಜಾಗತಿಕ ಹೂಡಿಕೆಯ ಅತ್ಯಂತ ಸುರಕ್ಷಿತ ತಾಣ ಎಂಬ ನಂಬಿಕೆಗೆ ಕಪ್ಪು ಚುಕ್ಕಿ ಮೂಡಿಸಿದಂತಾಗಿದೆ.


COMMERCIAL BREAK
SCROLL TO CONTINUE READING

ಅದಾನಿ ಸಮೂಹದೊಡನೆ ಭಾರತದ ಸಂಬಂಧ ಕಳೆದ ಸಾಕಷ್ಟು ಸಮಯದಿಂದ ಸಾರ್ವಜನಿಕ ಟೀಕೆಗಳಿಗೆ, ಅನುಮಾನಗಳಿಗೆ ಗುರಿಯಾಗುತ್ತಾ ಬಂದಿದೆ. ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ ಭಾರತ ಸರ್ಕಾರದೊಡನೆ ನಿಕಟ ಸಂಬಂಧ ಹೊಂದಿತ್ತು. ಅದಾನಿ ಸಮೂಹಕ್ಕೆ ಹಲವು ಬೃಹತ್ ಪ್ರಮಾಣದ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳು ಹಾಗೂ ಪರವಾನಗಿಗಳನ್ನು ಒದಗಿಸಲಾಗಿತ್ತು. ಆದರೆ ಇತ್ತೀಚೆಗೆ ಯಾಕೋ ಅದಾನಿಯ ಅದೃಷ್ಟ ಕೈಕೊಟ್ಟಿರುವಂತೆ ಭಾಸವಾಗುತ್ತಿದ್ದು, ಸಮೂಹ ಹಲವು ಕಾನೂನು ಹಾಗೂ ಹಣಕಾಸಿನ ಸವಾಲುಗಳನ್ನು ಎದುರಿಸುತ್ತಿದೆ.


ಇವುಗಳಲ್ಲಿ ಅತ್ಯಂತ ಮಹತ್ವದ ಸವಾಲೆಂದರೆ, ಎನ್‌ಸಿಎಲ್ಎಟಿ ಈಗಾಗಲೇ ಆದೇಶ ನೀಡಿ, ಅದಾನಿ ಪವರ್ ಸಂಸ್ಥೆ ಅದರ ಸಮೂಹ ಸಂಸ್ಥೆಯಾದ ಕೋಸ್ಟಲ್ ಗುಜರಾತ್ ಪವರ್ ಲಿಮಿಟೆಡ್ (ಸಿಜಿಪಿಎಲ್) ನಲ್ಲಿ ಹೂಡಿಕೆ ಮಾಡಿರುವವರಿಗೆ 3,000 ಕೋಟಿ ಹಣ ಪಾವತಿಸಬೇಕು ಎಂದು ಆದೇಶಿಸಿರುವುದು. ಈ ಆದೇಶದ ಪಾಲನೆಯಿಂದ ಅದಾನಿ ಪವರ್ ಸಂಸ್ಥೆ ದಿವಾಳಿಯಾಗುವ ಸಾಧ್ಯತೆಗಳೂ ಇವೆ. ಅಂತಹ ಪರಿಸ್ಥಿತಿ ಉಂಟಾದರೆ, ಅದರಿಂದ ಭಾರತದ ವಿದ್ಯುತ್ ಸುರಕ್ಷತೆಗೆ ಸವಾಲು ಎದುರಾಗಿ, ಸರ್ಕಾರಕ್ಕೂ ಕಷ್ಟಕರ ಸನ್ನಿವೇಶ ತಲೆದೋರುವಂತೆ ಮಾಡಬಹುದು.


ಇದನ್ನೂ ಓದಿ : Audi-Mercedes ಕಾರಿಗಿಂತ ದುಬಾರಿ ಈ 2 ಇಂಚಿನ ಕೀಟ: ಕೋಟಿ ಬೆಲೆಬಾಳುವ ಆ ಜೀವಿ ಯಾವುದು ಗೊತ್ತಾ?


ವಿಮಾನ ನಿಲ್ದಾಣದ ಮೇಲೆ ಅದಾನಿ ಹಿಡಿತ ಕಳೆದುಕೊಂಡಿರುವುದು ವಿಮಾನ ನಿಲ್ದಾಣದ ಭವಿಷ್ಯದ ಕುರಿತು ಹಲವು ಪ್ರಶ್ನೆಗಳು ಎದುರಾಗುವಂತೆ ಮಾಡಿದೆ. ಅದಾನಿ ನಿಯಂತ್ರಣದಲ್ಲಿ ವಿಮಾನ ನಿಲ್ದಾಣ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಈಗ ಅದಾನಿ ಸಮೂಹದಿಂದ ವಿಮಾನ ನಿಲ್ದಾಣ ನಿಯಂತ್ರಣವನ್ನು ಮರಳಿ ಪಡೆದಿರುವುದು ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಕಾರ್ಯಾಚರಣೆ ಹೇಗಿರಬಹುದು ಎಂಬ ಪ್ರಶ್ನೆಗಳನ್ನು ಮೂಡಿಸಿದೆ. ಬಹುಶಃ ಮುಂದಿನ ಕೆಲದಿನಗಳಲ್ಲಿ ಇನ್ನಾವುದೋ ಬೇರೆ ಸಂಸ್ಥೆ ವಿಮಾನ ನಿಲ್ದಾಣ ನಿಯಂತ್ರಣ ಪಡೆದುಕೊಳ್ಳಬಹುದು. ಆದರೆ ಅವುಗಳ ಕಾರ್ಯಾಚರಣೆ ಹೇಗೆ ಎಂಬ ಕುರಿತು ಇನ್ನೂ ಯಾವುದೇ ಸ್ಪಷ್ಟನೆ ಕಂಡುಬಂದಿಲ್ಲ.


ಪ್ರಸ್ತುತ ಬಹುತೇಕರನ್ನು ಕಾಡುತ್ತಿರುವ ವಿಚಾರವೆಂದರೆ ಸೇವಾ ಗುಣಮಟ್ಟದಲ್ಲಿ ಎದುರಾಗಬಹುದಾದ ಕುಸಿತ ಮತ್ತು ಉದ್ಯೋಗ ನಷ್ಟ. ಅದಾನಿಯ ಪ್ರಭಾವವಿಲ್ಲದೆ ವಿಮಾನ ನಿಲ್ದಾಣದ ನಿರ್ವಹಣೆ ಹೇಗೆ? ವಿಮಾನ ನಿಲ್ದಾಣ ನಿರ್ವಹಣೆಯ ವೆಚ್ಚ ಎಷ್ಟು? ಯಾವ ಯಾವ ಸೇವೆಗಳು ಲಭ್ಯವಿದೆ ಎಂಬುದರ ಕುರಿತು ಇನ್ನೂ ಯಾವುದೇ ಸ್ಪಷ್ಟ ಮಾಹಿತಿಗಳು ತಿಳಿದಿಲ್ಲ. ಈ ಕಾರಣಗಳಿಂದ ಬೇರೆ ಯಾರಾದರೂ ಧೈರ್ಯದಿಂದ ವಿಮಾನ ನಿಲ್ದಾಣದಲ್ಲಿ ಹಣ ಹೂಡಿಕೆ ಮಾಡುವುದು, ಅವುಗಳನ್ನು ನಿರ್ವಹಿಸುವುದು ಕಷ್ಟಕರವಾಗುವಂತಾಗಿದೆ.


ಒಟ್ಟಾರೆಯಾಗಿ, ವಿಮಾನ ನಿಲ್ದಾಣ ಆಡಳಿತದಿಂದ ಅದಾನಿ ಹೊರನಡೆಯುವುದು ವಿಮಾನ ನಿಲ್ದಾಣದ ಭವಿಷ್ಯಕ್ಕೆ ಬೃಹತ್ ಸವಾಲಾಗಿದೆ. ಜಾಗರೂಕವಾಗಿ ಯೋಜನೆಗಳನ್ನು ನಡೆಸುವುದರಿಂದ, ಸರ್ಕಾರ ಮತ್ತು ಇತರ ಹೂಡಿಕೆದಾರರ ನಡುವೆ ಸಹಕಾರ ಸಾಧಿಸುವುದರಿಂದ ಇನ್ನೂ ವಿಮಾನ ನಿಲ್ದಾಣ ಲಾಭದಾಯಕವಾಗಿ ಮುಂದುವರಿದು, ಸಮಾಜಕ್ಕೆ ಉಪಕಾರಿಯಾಗಲು ಸಾಧ್ಯವಿದೆ.


ಎಲ್ಲಕ್ಕಿಂತ ಹೆಚ್ಚಾಗಿ, ಅದಾನಿ ಸಮೂಹ ಬಹುತೇಕ ಸರ್ಕಾರಿ ಗುತ್ತಿಗೆಗಳ ಮೇಲೆ ಅವಲಂಬಿತವಾಗಿದೆ. ಅದರ ಹಲವಾರು ಅಂಗ ಸಂಸ್ಥೆಗಳ ವಿಚಾರವೂ ಇದೇ ರೀತಿಯಾಗಿದೆ. ಅದಾನಿ ಸಮೂಹದ ವೈಫಲ್ಯವೂ ಇತರ ಸಂಸ್ಥೆಗಳ ಮೇಲೂ ಇಂತಹ ಸರಣಿ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇದರಿಂದಾಗಿ ಉದ್ಯೋಗ ನಷ್ಟ, ಹೂಡಿಕೆಯ ಮಟ್ಟದಲ್ಲಿ ಕುಸಿತಗಳು ತಲೆದೋರಬಹುದು. ಇದೆಲ್ಲದರ ಪರಿಣಾಮವಾಗಿ ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ.


ಇದನ್ನೂ ಓದಿ : PM Kisan : ಪಿಎಂ ಕಿಸಾನ್‌ನ 13ನೇ ಕಂತಿನ ಮೊದಲೇ 14 ಕೋಟಿ ರೈತರಿಗೆ ಭರ್ಜರಿ ಸಿಹಿ ಸುದ್ದಿ!


ಇದೇ ಸಮಯದಲ್ಲಿ, ಅದಾನಿ ಸಮೂಹದ ಸಮಸ್ಯೆಗಳು ಭಾರತದ ಸುರಕ್ಷತೆಯ ಮೇಲೂ ಪರಿಣಾಮ ಬೀರಬಲ್ಲದು. ಪ್ರಮುಖವಾಗಿ, ಅದಾನಿ ಸಮೂಹ ಸಾಕಷ್ಟು ರಕ್ಷಣಾ ಸಂಬಂಧಿತ ಯೋಜನೆಗಳ ಮೇಲೆ ಹೂಡಿಕೆ ಮಾಡಿದೆ. ಅವುಗಳಲ್ಲಿ ಸಿಯಾಚಿನ್ ಬೇಸ್ ಕ್ಯಾಂಪ್ ಯೋಜನೆಯೂ ಸೇರಿದೆ. ಇಂತಹ ಯೋಜನೆಗಳಲ್ಲಿನ ವೈಫಲ್ಯ ಭಾರತದ ರಕ್ಷಣಾ ಸಿದ್ಧತೆಯ ಮೇಲೂ ಗಂಭೀರ ಪರಿಣಾಮಗಳನ್ನು ಉಂಟುಮಾಡಬಲ್ಲದು. ಅದರೊಡನೆ, ಅದಾನಿ ಸಮೂಹ ಭಾರತ ಸರ್ಕಾರದೊಡನೆ ನಿಕಟ ಸಂಪರ್ಕ ಹೊಂದಿದ್ದು, ಅದು ಕೈಗೊಳ್ಳುವ ಕ್ರಮಗಳು ಸರ್ಕಾರದ ನಿರ್ಧಾರ ಕೈಗೊಳ್ಳುವಿಕೆಯ ಮೇಲೂ ಪ್ರಭಾವ ಬೀರಬಲ್ಲದು.


ಸರಳವಾಗಿ ಹೇಳುವುದಾದರೆ, ಅದಾನಿ ಸಮೂಹದ ಕುಸಿತ ಕೇವಲ ಆರ್ಥಿಕ ಸವಾಲು ಮಾತ್ರವೇ ಆಗಿ ಉಳಿದಿಲ್ಲ. ಅದು ಭಾರತದ ರಾಷ್ಟ್ರೀಯ ಸುರಕ್ಷತೆಗೂ ಅಪಾಯ ತಂದೊಡ್ಡಬಲ್ಲದು. ಈ ಕಾರಣದಿಂದ ಸರ್ಕಾರವೂ ಅದಾನಿ ಸಮೂಹದ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿ, ಅದಾನಿ ಸಮೂಹದ ವೈಫಲ್ಯ ಭಾರತದ ಸುರಕ್ಷತೆಗೆ ಸವಾಲೊಡ್ಡುವುದಿಲ್ಲ ಎಂಬುದನ್ನು ಖಚಿತಪಡಿಸಬೇಕು.


ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.