ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಕಿಕ್ ಬಾಕ್ಸಿಂಗ್ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮೈಸೂರಿನ ಯುವಕ ಸೆಣಸಾಡುತ್ತಲೇ ದಿಢೀರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಹೊಸಕೇರಿ ನಿವಾಸಿ ನಿಖಿಲ್ (24) ಸಾವನ್ನಪ್ಪಿರುವ ಬಾಕ್ಸರ್. ಜುಲೈ 10ರಂದು ಈ ಘಟನೆ ನಡೆದಿದೆ. ಬೆಂಗಳೂರಿನ ಕೆಂಗೇರಿಯಲ್ಲಿ  K 1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಕಿಕ್ ಬಾಕ್ಸಿಂಗ್ ಸ್ಪರ್ಧೆ ಆಯೋಜನೆಗೊಂಡಿತ್ತು.


COMMERCIAL BREAK
SCROLL TO CONTINUE READING

ಯುವಕ‌ ನಿಖಿಲ್ ರಿಂಗ್‌ ನಲ್ಲಿ ಸೆಣೆಸಾಡುತ್ತಿದ್ದ ವೇಳೆ ಎದುರಾಳಿಯ ಏಟಿಗೆ ಸಾವನ್ನಪ್ಪಿದ್ದಾರೆ. ಎದುರಾಳಿ ತಲೆಗೆ ಹೊಡೆದ ಒಂದೇ ಏಟಿಗೆ ನಿಖಿಲ್ ಬಾಕ್ಸಿಂಗ್ ರಿಂಗ್ ನಲ್ಲಿ ಕೆಳಗೆ ಬಿದ್ದಿದ್ದರು.  ನಿಖಿಲ್ ಕೆಳಗೆ ಬೀಳುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.  ತಕ್ಷಣ ನಿಖಿಲ್ ರನ್ನು ನಾಗರಬಾವಿಯ ಜಿ.ಎಂ. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಶ್ವಾಸಕೋಶ ಭಾಗಕ್ಕೆ ತೀವ್ರ ಪೆಟ್ಟಾಗಿದ್ದರಿಂದ ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು.  ೨ ದಿನಗಳ ಕಾಲ‌ ಕೋಮಾದಲ್ಲಿದ್ದ ನಿಖಿಲ್ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.  


ಇನ್ನು ನಿಖಿಲ್ ತಂದೆ ಸುರೇಶ್ ಕೂಡ ಬಾಕ್ಸರ್ ಆಗಿದ್ದರು. ತಮ್ಮ ಪುತ್ರ ನಿಖಿಲ್ ಕಿಕ್ ಬಾಕ್ಸಿಂಗ್ ನಲ್ಲಿ ಸಾಕಷ್ಟು ಹೆಸರು ಮಾಡಬೇಕು ಅಂತಾ ಅವರು ಕನಸು ಕಂಡಿದ್ದರು. ಈ ಹಿನ್ನೆಲೆ ನಿಖಿಲ್‌ ಮೈಸೂರಿನ ಜಯನಗರದಲ್ಲಿ ವಿಕ್ರಂ ಎಂಬುವರ ಬಳಿ ಬಾಕ್ಸಿಂಗ್‌ ಕಲಿಯುತ್ತಿದ್ದರು.  ಹಲವಾರು ಸ್ಪರ್ಧೆಗಳಲ್ಲಿಯೂ ಸಹ ಅವರು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.  ಘಟನೆ ನಂತರ ಕಿಕ್‌ ಬಾಕ್ಸಿಂಗ್‌ ಸ್ಪರ್ಧೆ ಆಯೋಜಿಸಿದ್ದ ರವಿಶಂಕರ್‌ ಎಂಬುವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.