ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಜ್ಜಾಗುತ್ತಿರುವ ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8ರವರೆಗೆ ನಡೆಯಲಿರುವ ಮೈಸೂರು ದಸರೆಗೆ ಅರಮನೆ ನಗರಿ ಸಿದ್ಧಗೊಳ್ಳುಟ್ಟಿದೆ. ಸೆ. 29ರಂದು ರಾಜ ಮನೆತನದ ಖಾಸಗಿ ದರ್ಬಾರ್ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಇಂದಿನ ಶುಭ ಲಗ್ನದಲ್ಲಿ ಮೈಸೂರು ಅರಮನೆಯಲ್ಲಿ 'ರತ್ನ ಖಚಿತ ಸಿಂಹಾಸನ' ಜೋಡಣೆ ಕಾರ್ಯ ನಡೆಯಲಿದೆ.


COMMERCIAL BREAK
SCROLL TO CONTINUE READING

ಅರಮನೆಯ ದರ್ಬಾರ್​ ಹಾಲ್​ನಲ್ಲಿ ಸಂಪ್ರದಾಯದಂತೆ 'ರತ್ನ ಖಚಿತ ಸಿಂಹಾಸನ' ಜೋಡಣೆ ಕಾರ್ಯ ನಡೆಯುತ್ತಿದೆ. ಹೀಗಾಗಿ ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.


ಯದುವಂಶದ ರಾಜಮಾತೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ 'ಚಿನ್ನದ ಸಿಂಹಾಸನದ ಜೋಡಣೆ' ಕಾರ್ಯ ನಡೆಯಲಿದೆ. ಅರಮನೆಯ ಸಿಬ್ಬಂದಿ ಸಿಂಹಾಸನ ಜೋಡಣಾ ಕಾರ್ಯ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ನವಗ್ರಹ ಹೋಮ ಮತ್ತು ಗಣಹೋಮ ಮಾಡಿ ಪೂಜೆ ನೆರವೇರಿಸಲಾಗುತ್ತದೆ.


ದಸರಾ ಸಂದರ್ಭದಲ್ಲಿ ಮಾತ್ರ ಸಿಂಹಾಸನ ಜೋಡಣೆ ಮಾಡಲಾಗುತ್ತದೆ. ವಾಡಿಕೆಯಂತೆ ನವರಾತ್ರಿ ಸಂದರ್ಭದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 'ರತ್ನ ಖಚಿತ ಸಿಂಹಾಸನ'ದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುತ್ತಾರೆ.