ಮೈಸೂರು ದಸರಾ, ಎಷ್ಟೊಂದು ಸುಂದರ ಚೆಲ್ಲಿರಿ ನಗೆಯಾ ಪನ್ನೀರಾ...... ಯಾರಿಗೆ ತಾನೇ ತಿಳಿದಿಲ್ಲ ಈ ಹಾಡು...! ಬರೀ ಹಾಡಷ್ಟೇ ಅಲ್ಲ ನಮ್ಮ ನಾಡಿನ ಹೆಮ್ಮೆಯ ಮೈಸೂರು ದಸರಾವು ಅಷ್ಟೇ ಸುಂದರ. 


COMMERCIAL BREAK
SCROLL TO CONTINUE READING

ಕನ್ನಡ ನಾಡಿನ ಕಲೆ-ಸಂಸ್ಕೃತಿ ಬಿಂಬಿಸುವ, ದೇಶ-ವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ, ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ ನಾಡ ಹಬ್ಬ 'ದಸರಾ'ದಲ್ಲಿ ನವ ದಿನವೂ ಹೊಸ-ಹೊಸ ಸಂಭ್ರಮ.  ಇದನ್ನು ಶರದ್ ನವರಾತ್ರಿ ಎಂದೂ ಸಹ ಕರೆಯುವರು. ಏಕೆಂದರೆ ಶರದ್ ಋತುವಿನಲ್ಲಿ ಆಚರಿಸಲ್ಪಡುವ ಹಬ್ಬವು ನಾಡಿನ ಒಂದು ವಿಶೇಷ. 


ದಸರಾ ಆಚರಣೆಯನ್ನು ವಿಜಯ ದಶಮಿ ಎನ್ನಲು ಕಾರಣ ಏನು ಗೊತ್ತಾ?
'ದಸರಾ' ಆಚರಣೆಯನ್ನು 'ವಿಜಯ ದಶಮಿ' ಅಂತ ಯಾಕೆ ಕರೀತಾರೆ ಎಂಬ ಪ್ರಶ್ನೆ ಕಾಡಬಹುದು. ಇದಕ್ಕೆ ಕಾರಣ ಇರಲೇ ಬೇಕಲ್ಲವೇ.. ಹೌದು, ವಿಜಯದಶಮಿ ಆಚರಣೆಗೆ ಕಾರಣವಿದೆ. ದಂತ ಕಥೆಗಳ ಪ್ರಕಾರ ವಿಜಯ ದಶಮಿಯು ದುಷ್ಟರ ಸಂಹಾರ ಮತ್ತು ಶಿಷ್ಠರ ರಕ್ಷಣೆಯನ್ನು ಸೂಚಿಸುತ್ತದೆ. 'ಮಹಿಷಾಸುರ'ನನ್ನು ವದಿಸುವ ಸಲುವಾಗಿ ತಾಯಿ ಪಾರ್ವತಿಯು ಒಂಬತ್ತು ದುರ್ಗೆಯರ ಅವತಾರ ಧರಿಸುತ್ತಾಳೆ. ಒಂಬತ್ತು ದಿನಗಳು ವಿವಿಧ ಅವತಾರವೆತ್ತಿ ರಾಕ್ಷಸನನ್ನು ಸಂಹರಿಸಲು ಹೋರಾಡುತ್ತಾಳೆ, ಕೊನೆಯದಿವಸ ಮಹಿಷಾಸುರನನ್ನು ಸಂಹರಿಸಿ ವಿಜಯಸಾಧಿಸುತ್ತಾಳೆ. ಅಂದಿಗೆ ತಾಯಿ ಯುದ್ದ ಪ್ರಾರಂಭಿಸಿ ಹತ್ತನೆಯ ದಿನ. ಆದ್ದರಿಂದಲೇ ಆ ದಿನವನ್ನು 'ವಿಜಯ ದಶಮಿ' ಎಂದು ಕರೆಯಲಾಗುತ್ತದೆ. 


ನವರಾತ್ರಿ ಆಚರಣೆಯ ಹಿನ್ನಲೆ


ಮಹಿಷಾಸುರನನ್ನು ಕೊಂದ ನಂತರ ಮಹಿಷಾಸುರ ಜಿಲ್ಲೆಯ ಹೆಸರು 'ಮೈಸೂರು' ಆಗಿ ಬದಲಾಗುತ್ತದೆ. ಮೈಸೂರು ನಗರವು ದಸರಾ ಉತ್ಸವವನ್ನು ಆಚರಿಸುವ ದೀರ್ಘ ಸಂಪ್ರದಾಯವನ್ನು ಹೊಂದಿದೆ. ಕರ್ನಾಟಕ ರಾಜ್ಯವು ಮೊದಲು ಮೈಸೂರು ರಾಜ್ಯವಾಗಿತ್ತು. ಆದ್ದರಿಂದ ಮೈಸೂರು ರಾಜ್ಯದಲ್ಲಿ ಆಚರಿಸಲ್ಪಡುತ್ತಿದ್ದ 'ವಿಜಯದಶಮಿ'ಯು ನಾಡಹಬ್ಬ ಎಂದೇ ಪರಿಚಿತವಾಯಿತು. 


ಮೈಸೂರಿನ ರಾಜ ವಂಶಸ್ಥರು ಹಿಂದಿನ ಕಾಲದಿಂದಲೂ ನವರಾತ್ರಿ ಆಚರಣೆಯ ಒಂಬತ್ತು ದಿವಸಗಳಲ್ಲೂ ಅರಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ವಿಜಯದಶಮಿ ದಿನದಂದು ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ರಾಜರು ಚಿನ್ನದ ಅಂಬಾರಿಯಲ್ಲಿ ಕುಳಿತು 'ಬನ್ನಿಮಂಟಪಕ್ಕೆ' ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈಗ ಚಿನ್ನದ ಅಂಬಾರಿಯಲ್ಲಿ ರಾಜರ ಬದಲು ನಾಡದೇವತೆ ಚಾಮುಂಡೇಶ್ವರಿಯನ್ನು ಕೂರಿಸಿ 'ಬನ್ನಿಮಂಟಪಕ್ಕೆ' ಕರೆತರಲಾಗುತ್ತದೆ. ಇದೇ ಎಲ್ಲರ ನೆಚ್ಚಿನ 'ಜಂಬೂ ಸವಾರಿ'.