ಮೈಸೂರು : ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಪುರಾಣ ಪ್ರಸಿದ್ಧ ಗೌತಮ ಪಂಚ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.


COMMERCIAL BREAK
SCROLL TO CONTINUE READING

ಬೆಳಗ್ಗೆ 6.05ರಿಂದ 6.20ರವರೆಗಿನ ಶುಭ ಮೀನ ಲಗ್ನದಲ್ಲಿ 'ಶ್ರೀ ಮನ್ಮಹಾಗೌತಮ ರಥಾರೋಹಣ'ದೊಂದಿಗೆ ಆರಂಭವಾದ ಪಂಚ ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀ ಶ್ರೀಕಂಠೇಶ್ವರಸ್ವಾಮಿ ಕೃಪೆಗೆ ಪಾತ್ರರಾದರು. 


ನಂಜುಂಡೇಶ್ವರ ಎಂದೇ ಹೆಸರಾದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಜರುಗುವ ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಇಂದು ನಡೆದ ಪಂಚ ಮಹಾರಥೋತ್ಸವದಲ್ಲಿ ಗಣಪತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ, ಪಾರ್ವತಿ ಹಾಗೂ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಗಳನ್ನು 5 ಅಲಂಕೃತ ರಥಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು. 


ಅರ್ಚಕರು ಪೂಜಾ, ವಿಧಿ ವಿಧಾನಗಳನ್ನು ಪೂರೈಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಆವರಣದಿಂದ ಮೊದಲಿಗೆ ಸಂಪ್ರದಾಯದಂತೆ ಗಣಪತಿ ರಥವನ್ನು ಹೊರಡಿಸಲಾಯಿತು. ತದನಂತರ ಶ್ರೀಕಂಠೇಶ್ವರ ಸ್ವಾಮಿಯ ಬೃಹತ್ ರಥ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ರಥಗಳು ಹಿಂಬಾಲಿಸಿದವು. ರಥ ಬೀದಿಯಲ್ಲಿ ರಥೋತ್ಸವ ನಡೆಸಲಾಯಿತು. 


ಇದರೊಂದಿಗೆ ಶ್ರೀಕಂಠೇಶ್ವರಸ್ವಾಮಿಯನ್ನು ಹೊತ್ತ 10 ಅಡಿ ವ್ಯಾಸದ ಆರು ಬೃಹತ್‌ ಚಕ್ರಗಳನ್ನೊಳಗೊಂಡಿರುವ, ವಿಶಿಷ್ಟ ಕಲಾ ಕೆತ್ತನೆ, ನಾನಾ ಬಣ್ಣಗಳ ವಸ್ತ್ರಗಳು, ವಿವಿಧ ಬಗೆಯ ಪುಷ್ಪಗಳು, ಬಣ್ಣದ ಧ್ವಜಗಳಿಂದ ಅಲಂಕೃತಗೊಂಡಿದ್ದ ಸುಮಾರು 95 ಅಡಿ ಎತ್ತರದ ಬೃಹತ್‌ ರಥವನ್ನು ಜಾತಿ ಧರ್ಮಗಳ ಬೇಧವಿಲ್ಲದೆ ಎಲ್ಲಾ ವರ್ಗದ ಜನರು ಸೇರಿ ಭಕ್ತಿ ಭಾವದಿಂದ ಎಳೆದರು. ಈ ಭವ್ಯ ಸಂದರ್ಭವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆಗಳಿಂದ ಭಕ್ತಾದಿಗಳು ಆಗಮಿಸಿದ್ದರು. 


ಹಾಗೆಯೇ ಮಾ. 30ರಂದು ರಾತ್ರಿ 7ಗಂಟೆಗೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ಜರುಗಲಿದ್ದು, ಏ.1ರಂದು ದೇವಾಲಯದಲ್ಲಿ ಜರುಗುವ ನಂದಿ ವಾಹನೋತ್ಸವದೊಂದಿಗೆ ಈ ವರ್ಷದ ದೊಡ್ಡ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ.