ಜನವರಿ 12 ಸ್ವಾಮೀ ವಿವೇಕಾನಂದರು ಜನ್ಮ ತಾಳಿದ ದಿನವಾಗಿರುವುದರಿಂದ 1984ರಿಂದ ಇದನ್ನು ನಿರಂತರವಾಗಿ 'ರಾಷ್ಟ್ರೀಯ ಯುವ ದಿನ' ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ಸ್ವಾಮೀ ವಿವೇಕಾನಂದರು ಹಿಂದೂ ಧರ್ಮವನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಲು ಮಹತ್ತರವಾದ ಕೊಡುಗೆಯನ್ನು ನೀಡಿದರು. ಅದರಲ್ಲೂ ವೇದಾಂತ ಮತ್ತು ಯೋಗ ಪರಂಪರೆಯನ್ನು ಪ್ರಸಿದ್ದಗೊಳಿಸಿದ ಅವರು ಹಿಂದೂ ಧರ್ಮವನ್ನು ಆಧುನಿಕರಣಗೊಳಿಸಲು ಶ್ರಮಿಸಿದರು. 


COMMERCIAL BREAK
SCROLL TO CONTINUE READING

ಬ್ರಿಟಿಷರ ವಸಾಹತುಶಾಹಿ ಭಾರತದಲ್ಲಿ ರಾಷ್ಟ್ರೀಯತೆಯ ತತ್ವವನ್ನು ಪ್ರಸರಿಸುವುದರ ಮೂಲಕ ವಿಕೇಂದ್ರೀಕೃತವಾಗಿದ್ದ ಹಿಂದೂ ಧರ್ಮಕ್ಕೆ ಐಕ್ಯತೆಯನ್ನು ತಂದರು. ವಿವೇಕಾನಂದರು ರಾಮಕೃಷ್ಣ ಮಠವನ್ನು ಸ್ಥಾಪಿಸುವುದರ ಮೂಲಕ  ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 1893 ರಲ್ಲಿ ಚಿಕ್ಯಾಗೋ ದಲ್ಲಿ ನಡೆದ ಜಾಗತಿಕ ಧಾರ್ಮಿಕ ಸಂಸತ್ತಿನಲ್ಲಿ  'ಅಮೆರಿಕಾದ ಸಹೋದರ ಸಹೋದರಿಯರೇ' ಎಂದು ನೀಡಿದ ಭಾಷಣ ಇಂದಿಗೂ ಕೂಡ ಪ್ರಸಿದ್ದಿಯಾಗಿದೆ.


ಸ್ವಾಮೀ ವಿವೇಕಾನಂದರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ವಿವೇಕಾನಂದರ ಜನ್ಮ ದಿನವನ್ನು 'ರಾಷ್ಟ್ರೀಯ ಯುವ ದಿನ' ಎಂದು ಆಚರಿಸುವ ಮೂಲಕ ಅವರ ಚಿಂತನೆಗಳನ್ನು ಪ್ರಸ್ತುತವಾಗಿರಿಸಲಾಗಿದೆ. 2013 ಜನವರಿ 13 ರಂದು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರು ವಿವೇಕಾನಂದರ 150 ಜನ್ಮದಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಾತನಾಡುತ್ತಾ ವಿವೇಕಾನಂದರ ಚಿಂತನೆಗಳನ್ನು ಶ್ಲಾಘಿಸಿ ಅವುಗಳನ್ನು  ಮುಂದಿನ ಯುವ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದರು.