ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಅಂಬಿ, ಅರಸನಂತೆ ಬಂದು ಅರಸನಾಗಿಯೇ ಹೋದರು ಎಂದು ಅಂಬರೀಶ್ ಪತ್ನಿ ಸುಮಲತಾ ಭಾವುಕರಾದರು. 


COMMERCIAL BREAK
SCROLL TO CONTINUE READING

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡ ಚಿತ್ರೋದ್ಯಮದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಹಿಸಿದ್ದ 'ಅಂಬಿ ನಮನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸುಮಲತಾ, ಕನ್ನಡ ಚಿತ್ರರಂಗದಲ್ಲಿ ಅಂಬರೀಶ್ ಅವರ ಪ್ರಯಾಣದ ಬಗ್ಗೆ ನನಗಿಂತಲೂ ಚೆನ್ನಾಗಿ ಬಲ್ಲವರಿದ್ದಾರೆ. ನಾನು ಮದುವೆಯಾಗುವ ಎಷ್ಟೋ ವರ್ಷಗಳ ಮೊದಲೇ ಅವರ ಸಿನಿ ಪಯಣ ಆರಂಭವಾಗಿತ್ತು. ಅವರಿಗೆ ಕ್ರೀಡೆಯಲ್ಲಿ ತುಂಬಾ ಆಸಕ್ತಿ. ಅವರೇ ನನಗೆ ಎಲ್ಲವೂ ಆಗಿದ್ದರು. ಅವರಿಗೆ ಬೆನ್ನೆಲುಬಾದ ಕರುನಾಡ ಜನತೆ, ನಿರ್ದೇಶಕರು, ತಂತ್ರಜ್ಞರಿಗೆ ನಾನು ಧನ್ಯವಾದ ಹೇಳುತ್ತೇನೆ. ಹಾಗೆಯೇ ಅವರನ್ನು ಅರಸನಂತೆಯೇ ಕಳುಹಿಸಿಕೊಟ್ಟ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.


ಅಂಬರೀಶ್ ಅವರಿಗೆ ಮಗನ ಸಿನಿಮಾ ನೋಡಬೇಕೆಂಬ ಮಹಾದಾಸೆಯಿತ್ತು. ಆದರೆ ಅದು ಕಡೆಗೂ ಕೈಗೂಡಲೇ ಇಲ್ಲ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಪುತ್ರ ಅಭಿಷೇಕ್ ಮೇಲೆ ಇರಲಿ. ಅವನನ್ನೂ ಪ್ರೋತ್ಸಾಹಿಸಿ, ಹಾರೈಸಿ ಎಂದು ಸುಮಲತಾ ನುಡಿದರು.


ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿರ್ಮಲಾನಂದನಾಥ ಸ್ವಾಮೀಜಿ, ನಟಿ ಜಯಂತಿ, ಜಗ್ಗೇಶ್, ಉಮಾಶ್ರೀ, ದೊಡ್ಡಣ್ಣ, ಮುನಿರತ್ನ ಸೇರಿದಂತೆ ಚಿತ್ರರಂಗದ ಅನೇಕರು ಪಾಲ್ಗೊಂಡಿದ್ದರು.