ನವದೆಹಲಿ: ಕಿರಾರಿಯ ಜವಳಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 9 ಜನರು ಮೃತಪಟ್ಟಿದ್ದಾರೆ. ಇದೇ ವೇಳೆ ಹಲವಾರು ಜನರು ಗಾಯಗೊಂಡಿದ್ದಾರೆ. ಕಿರಾಡಿ ಪ್ರದೇಶದ ಇಂದ್ರ ಎನ್‌ಕ್ಲೇವ್‌ನಲ್ಲಿರುವ ನಾಲ್ಕು ಅಂತಸ್ತಿನ ಮನೆಯ ಕೆಳಭಾಗದಲ್ಲಿರುವ ಗೋದಾಮಿನಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಒಂದು ಡಜನ್‌ಗೂ ಹೆಚ್ಚು ಜನರು ಸಿಲುಕಿಕೊಂಡಿದ್ದರು. 


COMMERCIAL BREAK
SCROLL TO CONTINUE READING

ಈ ಬೆಂಕಿ ಜವಳಿ ಗೋದಾಮಿನಲ್ಲಿ ರಾತ್ರಿ ಹನ್ನೆರಡು ಮೂವತ್ತಕ್ಕೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದ್ದು, ಇಂದು ಬೆಳಗ್ಗೆ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.


ನಾಲ್ಕು ಅಂತಸ್ತಿನ ಕಟ್ಟಡದ ಕೆಳಭಾಗದಲ್ಲಿ ಗೋದಾಮು ಇದೆ ಎನ್ನಲಾಗಿದೆ. ಮೊದಲಿಗೆ ನೆಲ ಮಳಿಗೆಯಲ್ಲಿದ್ದ ಗೋದಾಮಿನಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ತ್ವರಿತವಾಗಿ ಹಬ್ಬಿದ ಬೆಂಕಿಯಿಂದಾಗಿ ಮೇಲಿನ ಮಹಡಿಯಲ್ಲಿ ತಮ್ಮ ಮನೆಯಲ್ಲಿ ಮಲಗಿದ್ದವರಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಎಲ್ಲರೂ ಮೇಲಿನ ಮಹಡಿಗಳಲ್ಲಿ ಇದ್ದದ್ದರಿಂದ ಬೆಂಕಿ ಹರಡುತ್ತಿದ್ದ ವೇಳೆ ತಪ್ಪಿಸಿಕೊಳ್ಳಳು ಅವಕಾಶವಾಗಲಿಲ್ಲ ಎನ್ನಲಾಗಿದೆ. 


ಎರಡು ವಾರಗಳ ಹಿಂದೆ ರಾಣಿ ಝಾನ್ಸಿ ರಸ್ತೆಯ ಅನಾಜ್ ಮಂಡಿ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕೂಡ ಬೆಂಕಿ ಅವಘಡ ಸಂಭವಿಸಿತ್ತು. ಈ ಅಪಘಾತದಲ್ಲಿ 43 ಜನರು ಸಾವನ್ನಪ್ಪಿದ್ದರೆ, 60 ಜನರು ಗಾಯಗೊಂಡಿದ್ದಾರೆ. ಇದು ದೆಹಲಿಯಲ್ಲಿ ಇತ್ತೀಚಿಗೆ ಸಂಭವಿಸಿದ  ಅತಿದೊಡ್ಡ ಅಗ್ನಿ ಅಪಘಾತಗಳಲ್ಲಿ ಒಂದಾಗಿದೆ. ಇದಕ್ಕೂ ಮೊದಲು, ಜೂನ್ 13, 1997 ರಂದು, ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಪ್ರದೇಶದಲ್ಲಿರುವ ಗಿಫ್ಟ್ ಸಿನೆಮಾದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಇದರಲ್ಲಿ 59 ಜನರು ಪ್ರಾಣ ಕಳೆದುಕೊಂಡರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡರು.