ಲಕ್ನೋ: ಸಂಸತ್ತಿಗೆ ಪುನರಾಯ್ಕೆಯಾದ ನಂತರ ಲಕ್ನೋಗೆ ಮೊದಲ ಬಾರಿಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ದೊಡ್ಡ ವಿಷಯವಾಗಿದೆ, ಏಕೆಂದರೆ ಪಕ್ಷವು ತನ್ನ ಸ್ಥಾನಗಳನ್ನು ಹೆಚ್ಚಿಸಿತು ಮತ್ತು ಸಮಾಜವಾದಿ ಪಕ್ಷದ(ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮೈತ್ರಿಯ ಹೊರತಾಗಿಯೂ ಬಿಜೆಪಿ ದೊಡ್ಡ ಯಶಸ್ಸನ್ನು ಕಂಡಿದೆ ಎಂದರು. 


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿಗೆ ಜನರು ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಹೇಳಿದ ಸಿಂಗ್, ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದ ನಂತರ ಜನರು ವಿಭಿನ್ನ ರೀತಿಯಲ್ಲಿ ಯೋಚಿಸುತ್ತಿದ್ದರು. ಆದರೆ ಶೇಕಡಾ 40 ರಷ್ಟು ಮತಗಳನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ವಿರುದ್ಧವಾಗಿ, ಬಿಜೆಪಿಗೆ ರಾಜ್ಯದಲ್ಲಿ ಸುಮಾರು 50 ಶೇಕಡಾ ಮತಗಳು ದೊರೆತಿವೆ ಎಂದು ಅವರು ಹೇಳಿದರು.


"ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ನಂತರವೂ ಅಧಿಕಾರ ವಿರೋಧಿ ಇರಲಿಲ್ಲ, ಆದರೆ ಇದಕ್ಕೆ ವಿರುದ್ಧವಾಗಿ, ಅಧಿಕಾರದ ಪರವಾಗಿತ್ತು. ಬಿಜೆಪಿ ತನ್ನ ಮತ ಪಾಲನ್ನು ಮತ್ತು ಸಂಸದರ ಸಂಖ್ಯೆಯನ್ನು ಹೆಚ್ಚಿಸಿತು. ಇದು ನಿಜಕ್ಕೂ ದೊಡ್ಡ ವಿಷಯ" ಎಂದು ಅವರು ಹೇಳಿದರು. ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದಕ್ಕಾಗಿ ಸೈನಿಕರನ್ನು ಶ್ಲಾಘಿಸಿದ ಸಿಂಗ್, ಸರ್ಜಿಕಲ್ ಸ್ಟ್ರೈಕ್, ವಾಯುದಾಳಿಯಂತಹ ದಿಟ್ಟ ಹೆಜ್ಜೆ ಭಾರತವು ದುರ್ಬಲ ದೇಶವಲ್ಲ ಎಂದು ಇಡೀ ಜಗತ್ತಿಗೆ ತಿಳಿಸುತ್ತದೆ" ಎಂದು ನುಡಿದರು.


ಜನರ  ಕನಿಷ್ಠ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವಾಗಿದೆ. ಈಗಾಗಲೇ ವಿವಿಧ ಮೆಗಾ ಯೋಜನೆಗಳ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚೆ ಆರಂಭವಾಗಿದೆ ಎಂದು ಸಚಿವರು ಹೇಳಿದರು.


ಈ ಸಂದರ್ಭದಲ್ಲಿ ಹಾಜರಿದ್ದವರೊಂದಿಗೆ ಭಾವನಾತ್ಮಕವಾಗಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ತಮ್ಮ ಮೇಲೆ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸಿದ್ದಕ್ಕಾಗಿ ಲಖನೌ ಜನರಿಗೆ ಋಣಿಯಾಗಿರುತ್ತೇನೆ ಎಂದು ಹೇಳಿದರು. "ಲಕ್ನೋದಲ್ಲಿ ಪಕ್ಷದ ಕಾರ್ಯಕರ್ತರು ತುಂಬಾ ಶ್ರಮವಹಿಸಿದರು ಮತ್ತು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಅವರು ಹೇಳಿದರು.