ನವದೆಹಲಿ: ಲಾಕ್‌ಡೌನ್ ಅವಧಿ ಹೆಚ್ಚಿಸಿದ ನಂತರ, ದೇಶೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣ ಟಿಕೆಟ್‌ಗಳನ್ನು ರದ್ದುಗೊಳಿಸಿದ ನಂತರ ಹಣವನ್ನು ಗ್ರಾಹಕರಿಗೆ ಹಿಂದಿರುಗಿಸುವುದಿಲ್ಲ ಎಂದು ಮತ್ತೊಮ್ಮೆ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದು, ಬದಲಿಗೆ ಕಂಪನಿಗಳು ಹೆಚ್ಚುವರಿ ಶುಲ್ಕವಿಲ್ಲದೆ ಹೊಸ ದಿನಾಂಕಗಳಲ್ಲಿ ಬುಕಿಂಗ್ ಸೌಲಭ್ಯವನ್ನು ಒದಗಿಸಲು ಅವಕಾಶ ನೀಡುವುದಾಗಿ ಹೇಳಿವೆ.


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೇಶವನ್ನುದ್ದೇಶಿಸಿ ನೀಡಿದ ಸಂದೇಶದಲ್ಲಿ ಲಾಕ್ ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿರುವುದಾಗಿ ಘೋಷಿಸಿದ್ದಾರೆ. ಇದಕ್ಕೂ ಮೊದಲು ಘೋಷಿಸಲಾಗಿದ್ದ 21 ದಿನಗಳ ಲಾಕ್ ಡೌನ್ ಏಪ್ರಿಲ್ 14ರಂದು ಮುಕ್ತಾಯಗೊಂಡಿದೆ. ಈ ಸಾರ್ವಜನಿಕ ಬಂದ್ ಹಿನ್ನೆಲೆ ದೇಶಾದ್ಯಂತ ನಾಗರಿಕ ವಿಮಾನಯಾನ ಸೇವೆಯನ್ನು ತಡೆಹಿಡಿಯಲಾಗಿದೆ.


ಮಾರ್ಚ್25 ರಿಂದ ಏಪ್ರಿಲ್ 14ರ ಅವಧಿಯಲ್ಲಿ ಬುಕ್ ಮಾಡಲಾಗಿರುವ ಟಿಕೆಟ್ ಗಳ ಮೊತ್ತವನ್ನು ಹಿಂದಿರುಗಿಸುವ ಬದಲು ಏರ್ಲೈನ್ಸ್ ಕಂಪನಿಗಳು ತಮ್ಮ ಗ್ರಾಹಕರಿಗೆ ಬೇರೆ ದಿನಾಂಕಗಳ ಮೇಲೆ ಟಿಕೆಟ್ ಬುಕ್ ಮಾಡುವ ಸೌಲಭ್ಯ ಕಲ್ಪಿಸಲಿವೆ. ಏರ್ ಇಂಡಿಯಾ ಹೊರತುಪಡಿಸಿ ಬಹುತೇಕ ಏರ್ಲೈನ್ಸ್ ಕಂಪನಿಗಳು ಏಪ್ರಿಲ್ 14ರ ನಂತರದ ಅವಧಿಗಾಗಿ ತಮ್ಮ ಡೊಮೆಸ್ಟಿಕ್ ಸೇವೆಯ ಬುಕಿಂಗ್ ಅನ್ನು ಮುಂದುವರೆಸಿದ್ದವು.


ಪ್ರಧಾನಿ ನರೇಂದ್ರ ಮೋದಿ ಅವರ ಲಾಕ್ ಡೌನ್ ಕಾಲಾವಧಿ ವಿಸ್ತರಣೆಯ ಬಳಿಕ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮೇ 3ರವರೆಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲು ನೋಟಿಸ್ ಜಾರಿ ಮಾಡಿದೆ.


ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿದ್ದ DGCA, "ನಾಗರಿಕ ವಿಮಾನಯಾನ ಸಚಿವಾಲಯದ ಅದ್ದೇಶದ ಹಿನ್ನೆಲೆ ದೇಶಾದ್ಯಂತ ಎಲ್ಲ ರೀತಿಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ " ಎಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ವಿಸ್ತಾರಾ ಕಂಪನಿಯ ವಕ್ತಾರ, "ಸಾರ್ವಜನಿಕ ಬಂದ್ ಮುಂದುವರೆದ ಕಾರಣ ನಾವು ಟಿಕೆಟ್ ಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದು, ಡಿಸೆಂಬರ್ 31, 2020ರವರೆಗೆ ಯಾವುದೇ ಅತಿರಿಕ್ತ ಶುಲ್ಕವಿಲ್ಲದೆ ಬೇರೆ ದಿನಾಂಕಗಳಂದು ಗ್ರಾಹಕರಿಗೆ ಟಿಕೆಟ್ ಬುಕ್ ಮಾಡುವ ಸೌಕರ್ಯ ಒದಗಿಸುತ್ತೇವೆ" ಎಂದಿದ್ದರು. ಆದರೆ, ಇದೆ ವೇಳೆ ಹೊಸ ಬುಕಿಂಗ್ ವೇಳೆ ಗ್ರಾಹಕರು ಫೇರ್ ಡಿಫರೆನ್ಸ್ ನೀಡಬೇಕಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ಇನ್ನೊಂದೆಡೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೋ ಏರ್ ಸಂಸ್ಥೆಯ ವಕ್ತಾರ, "ನಾವು ಈ ಮೊದಲೇ ಇಂತಹ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಸೋಮವಾರವಷ್ಟೇ ನಮ್ಮ 'PROTECT YOUR PNR' ಯೋಜನೆಯನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿರುವುದಾಗಿ" ಹೇಳಿದ್ದಾರೆ. ತನ್ನ ಈ ಶುಲ್ಕ ರಹಿತ ಹೊಸ ದಿನಾಂಕಗಳಲ್ಲಿ ಟಿಕೆಟ್ ಕಾಯ್ದಿರಿಸುವಿಕೆ ಯೋಜನೆಯ ಕುರಿತು ನಂತರ ಪರಿಶೀಲನೆ ನಡೆಸಲಿದೆ ಎಂದು ಕಂಪನಿ ಹೇಳಿದೆ.