ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವೆಡೆ ಇಂದೂ ಕೂಡ ಶುಕ್ರವಾರವೂ ಏಕಕಾಲದಲ್ಲಿ ಎರಡು ಚಳುವಳಿಗಳನ್ನು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಮಾ ಮಸೀದಿಯಿಂದ ಜಂತರ್ ಮಂತರ್‌ವರೆಗಿನ ಪ್ರತಿಭಟನೆ  ಮಧ್ಯಾಹ್ನ ನಡೆಯಲಿದ್ದು, ಇನ್ನೊಂದು ಚಳುವಳಿ ಸಂಜೆ ಇಂಡಿಯಾ ಗೇಟ್ ವರೆಗೆ ಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಭದ್ರತಾ ಕಾರಣಗಳಿಂದಾಗಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಜಸೋಲಾ ವಿಹಾರ್ ಶಾಹೀನ್ ಬಾಗ್ ಎಂಬ ಎರಡು ಮೆಟ್ರೋ ನಿಲ್ದಾಣಗಳನ್ನು ಈ ಮಧ್ಯೆ ಮುಚ್ಚಲಾಗಿದೆ.


ಗುರುವಾರ, ಪೌರತ್ವ ತಿದ್ದುಪಡಿ ಕಾಯ್ದೆ(CAA)ಯ ವಿರುದ್ಧ ದೇಶಾದ್ಯಂತ ನಡೆದ ಭಾರಿ ಪ್ರತಿಭಟನೆಯಲ್ಲಿ ಕನಿಷ್ಠ ಮೂರು ಜನರು ಸಾವನ್ನಪ್ಪಿದರು, ಹಲವಾರು ಮಂದಿ ಗಾಯಗೊಂಡರು ಮತ್ತು ನೂರಾರು ಜನರನ್ನು ಬಂಧಿಸಲಾಯಿತು. ಅನೇಕ ಸ್ಥಳಗಳಲ್ಲಿ ಪ್ರತಿಭಟನಾ ಮೆರವಣಿಗೆಗಳು ಮತ್ತು ಸಭೆಗಳನ್ನು ಆಯೋಜಿಸಲಾಗಿದ್ದರಿಂದ ವ್ಯಾಪಕವಾದ ಸಾಮಾಜಿಕ ಮತ್ತು ರಾಜಕೀಯ ನಾಯಕರೂ ಕೂಡ ಪ್ರತಿಭಟನೆಯಲ್ಲಿ ಸೇರ್ಪಡೆಗೊಂಡರು.


ದೆಹಲಿ, ಬೆಂಗಳೂರು, ಕೋಲ್ಕತಾ, ಚೆನ್ನೈ, ಲಕ್ನೋ, ಪಾಟ್ನಾ, ತಿರುವನಂತಪುರಂ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ  ಬಹುತೇಕ ಎಲ್ಲ ಪ್ರಮುಖ ನಗರಗಳಲ್ಲಿ ಸಾಕಷ್ಟು ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತಾದರೂ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಬೀದಿಗಿಳಿಯುವುದನ್ನು ಕಂಡು ಹಲವೆಡೆ ನಿಷೇದಾಜ್ಞೆ ವಿಧಿಸಲಾಯಿತು. 


ದೆಹಲಿಯಲ್ಲಿ, ಪ್ರತಿಭಟನಾಕಾರರು ಕೆಂಪು ಕೋಟೆ, ಮಂಡಿ ಹೌಸ್ ಮತ್ತು ಜಂತರ್ ಮಂತರ್ ಮುಂತಾದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಅದಾಗ್ಯೂ ಯಾವುದೇ ರೀತಿಯ ಅನಾಹುತ ಆಗದಂತೆ ತಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳು ಪ್ರತಿಭಟನೆಯನ್ನು ನಿಯೋಜಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಮೆಟ್ರೋ ರೈಲು ನಿಲ್ದಾಣಗಳನ್ನು ಸಹ ಮುಚ್ಚಲಾಯಿತು.


ಏತನ್ಮಧ್ಯೆ ವದಂತಿಗಳು ಹರಡದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ, ನಕಲಿ ಸುದ್ದಿಗಳನ್ನು ಹಂಚಿಕೊಂಡಿದ್ದಾರೆಂದು ಆರೋಪಿಸಿ 60 ಖಾತೆಗಳನ್ನು ನಿರ್ಬಂಧಿಸುವಂತೆ ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಿದರು. ಪೊಲೀಸರ ಪ್ರಕಾರ, ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿನ ಈ ಖಾತೆಗಳು ಪರಿಶೀಲಿಸದ ಸುದ್ದಿಗಳನ್ನು ಪೋಸ್ಟ್ ಮಾಡಿದ್ದು, ನಂತರ ಅದನ್ನು ವಾಟ್ಸಾಪ್‌ನಂತಹ ನಿಕಟ ಮಾಧ್ಯಮ ಗುಂಪುಗಳಲ್ಲಿ ಹಂಚಿಕೊಳ್ಳಲಾಗಿದೆ.


ಉತ್ತರ ಪ್ರದೇಶದಲ್ಲಿ ಪ್ರತಿಭಟನಾ-ಸಂಬಂಧಿತ ಕೆಲವು ಹಿಂಸಾಚಾರಗಳು ನಡೆದವು, ಈ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆಯೂ  ಹಲ್ಲೆ ನಡೆಸಲಾಯಿತು. ಉತ್ತರಪ್ರದೇಶ ರಾಜಧಾನಿ ಲಖನೌದಲ್ಲಿ ಒಬಿ ವ್ಯಾನ್‌ಗಳನ್ನು ಧ್ವಂಸಗೊಳಿಸಲಾಯಿತು. ಸಂಭಾಲ್ ನಿಂದ ಕೂಡ ಇದೇ ರೀತಿಯ ಹಿಂಸಾಚಾರ ಮತ್ತು ಅಗ್ನಿಸ್ಪರ್ಶಗಳು ವರದಿಯಾಗಿವೆ.