ಗುವಾಹಟಿ: ಅಸ್ಸಾಂನ 29 ಜಿಲ್ಲೆಗಳಲ್ಲಿ ಬುಧವಾರ ಪ್ರವಾಹ ಪರಿಸ್ಥಿತಿ ತೀವ್ರ ಸ್ವರೂಪ ಪಡೆದಿದ್ದು, ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 55 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ.


COMMERCIAL BREAK
SCROLL TO CONTINUE READING

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಬಗ್ಗೆ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಹದ ನೀರಿನಿಂದಾಗಿ ಒಂದು ಖಡ್ಗಮೃಗ ಸಾವನ್ನಪ್ಪಿದೆ ಎಂದು ಹೇಳಲಾಗಿದ್ದು, ಗುವಾಹಟಿ ಸೇರಿದಂತೆ ರಾಜ್ಯದ ಹಲವೆಡೆ  ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತಿವೆ ಎಂದು ತಿಳಿಸಿದೆ. 


ಎಎಸ್‌ಡಿಎಂಎ ಪ್ರಕಾರ, ಮೊರಿಗಾಂವ್‌ನಲ್ಲಿ ನಾಲ್ಕು ಜನರು, ಸೋನಿತ್‌ಪುರ ಮತ್ತು ಉಡಲ್‌ಗುರಿ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಕಮ್ರೂಪ್ (ಮೆಟ್ರೋ) ಮತ್ತು ನಾಗಾವ್ನ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಪ್ರವಾಹದಿಂದಾಗಿ 1.50 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಎಎಸ್‌ಡಿಎಂಎ ತಿಳಿಸಿದೆ. ಪ್ರವಾಹ ಸಂತ್ರಸ್ತರಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿರುವ 427 ಪರಿಹಾರ ಶಿಬಿರಗಳು ಮತ್ತು 392 ಪರಿಹಾರ ನಿರ್ವಹಣಾ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ.


ಕಾಜಿರಂಗಾ, ಮನಸ್ ರಾಷ್ಟ್ರೀಯ ಉದ್ಯಾನಗಳು ಮತ್ತು ಪೊಬಿಟೋರಾ ವನ್ಯಜೀವಿ ಅಭಯಾರಣ್ಯದ ವಿಶಾಲ ಪ್ರದೇಶಗಳು ಪ್ರವಾಹದ ನೀರಿನಿಂದ ಮುಳುಗಡೆಯಾದ ಪರಿಣಾಮ, ಖಡ್ಗಮೃಗಗಳು ಸೇರಿದಂತೆ ಹಲವು ಪ್ರಾಣಿಗಳು ಎತ್ತರದ ಪ್ರದೇಶಗಳತ್ತ ತೆರಳಿವೆ.