ಮೌ:  ಉತ್ತರಪ್ರದೇಶದಲ್ಲಿ ನಡೆಯಲಿರುವ ಉಪಚುನಾವಣೆ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು, ಘೋಸಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತರಕಾರಿ ವ್ಯಾಪಾರಿ ನಂದ್ ಲಾಲ್ ರಾಜ್ಭರ್ ಅವರ ಪುತ್ರ ವಿಜಯ್ ರಾಜ್ಭರ್ ಅವರನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಘೋಷಿಸಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಜಯ್, "ಬಿಜೆಪಿ ನನಗೆ ಒಂದು ಒಂದು ದೊಡ್ಡ ಜವಾಬ್ದಾರಿಯನ್ನು ನೀಡಿದೆ. ನನ್ನ ತಂದೆ ಮುನ್ಶಿ ಪುರ ಬಳಿ ಫುಟ್‌ಪಾತ್‌ನಲ್ಲಿ ತರಕಾರಿ  ಮಾರುತ್ತಾರೆ. ನನ್ನನ್ನು ನಂಬಿ ನೀಡಿರುವ ಜವಾಬ್ದಾರಿಯನ್ನು ಹಾಗೂ ಪಕ್ಷದ ನಿರೀಕ್ಷೆಗಳನ್ನು ಈಡೇರಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ" ಎಂದಿದ್ದಾರೆ.


"ಇದು ನನ್ನ ಮಗನ ಕಠಿಣ ಪರಿಶ್ರಮಕ್ಕೆ ಸಂದ ಫಲ" ಎಂದಿರುವ ವಿಜಯ್ ತಂದೆ ನಂದ್ ಲಾಲ್ ರಾಜ್ಭರ್, ಬಿಜೆಪಿ ಪಕ್ಷವು ಅವನನ್ನು ಸಮರ್ಥನೆಂದು ಪರಿಗಣಿಸಿ, ಟಿಕೆಟ್ ನೀಡಿದೆ. ಇದು ಒಳ್ಳೆಯ ಬೆಳವಣಿಗೆ. ನನ್ನ ಮಗನಿಗೆ ಟಿಕೆಟ್ ನೀಡಿದ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ.


ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತ ಮತ್ತು ಪಕ್ಷದ ನಗರ ಅಧ್ಯಕ್ಷರಾಗಿರುವ ವಿಜಯ್, ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮಕ್ಕೆ ಹೆಸರುವಾಸಿಯಾಗಿರುವ ವಿಜಯ್, ಈ ಹಿಂದೆ ಶಹಾದತ್‌ಪುರದಿಂದ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.


ಅಕ್ಟೋಬರ್ 21ರಂದು ದೇಶದ 13 ರಾಜ್ಯಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಪ್ರಕಟವಾಗಲಿದೆ.