ಹೈದರಾಬಾದ್: ತೆಲಂಗಾಣ ರಾಜಧಾನಿ ಸಮೀಪದ ಶಾದ್ ನಗರದಲ್ಲಿ ಅಪರಿಚಿತ ವ್ಯಕ್ತಿಗಳು ಮಹಿಳಾ ಪಶುವೈದ್ಯರನ್ನು ಕೊಂದಿದ್ದಾರೆ. ಮಹಿಳಾ ಪಶುವೈದ್ಯರ ಸುಟ್ಟ ಶವ ಗುರುವಾರ ತೆಲಂಗಾಣದ ರಂಗ ರೆಡ್ಡಿ ಜಿಲ್ಲೆಯ ಶಾದ್ ನಗರದ ಹೊರವಲಯದಲ್ಲಿ ಪತ್ತೆಯಾಗಿದೆ.  


COMMERCIAL BREAK
SCROLL TO CONTINUE READING

ಮೃತ ದೇಹವನ್ನು ಪಶುವೈದ್ಯೆ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ವೈದ್ಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.


ಸಂತ್ರಸ್ತೆ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಕರ್ತವ್ಯಕ್ಕಾಗಿ ಶಾದ್‌ನಗರದ ತನ್ನ ಮನೆಯಿಂದ ನಿತ್ಯ ಓಡಾಡುತ್ತಿದ್ದರು. ಬುಧವಾರ, ಆಕೆ ತನ್ನ ಸಹೋದರಿಗೆ ಕರೆ ಮಾಡಿ ಮನೆಗೆ ಹಿಂದಿರುಗುವಾಗ ತನ್ನ ದ್ವಿಚಕ್ರ ವಾಹನವು ಕೆಟ್ಟು ನಿಂತಿದೆ. ವಾಹನದ ಟೈರುಗಳು ಪಂಕ್ಚರ್ ಆಗಿವೆ ಎಂದು ಮಾಹಿತಿ ನೀಡಿದ್ದರು. ಜೊತೆಗೆ ಅದೇ ವೇಳೆ ತನಗೇಕೋ ಹೆದರಿಕೆಯಾಗುತ್ತಿದೆ ಎಂದು ತನ್ನ ತಂಗಿ ಬಳಿ ಹೇಳಿದ್ದರಂತೆ. ನಂತರ ಪ್ರಿಯಾಂಕಾ ಅವರ ಕುಟುಂಬವು ಅವಳನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಿಸಿದರೂ, ಆಕೆಯ ಫೋನ್ ಆಫ್ ಆಗಿದ್ದರಿಂದ ಸಂಪರ್ಕ ಸಾಧ್ಯವಾಗಲಿಲ್ಲ ಎಂದವರು ಮಾಹಿತಿ ನೀಡಿದ್ದಾರೆ.


ಬಳಿಕ ಕುಟುಂಬದವರು ಶಂಶಾಬಾದ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಗುರುವಾರ ಬೆಳಿಗ್ಗೆ ಶಾದ್‌ನಗರ ಹೊರವಲಯದಲ್ಲಿ ಯುವತಿಯೋಬ್ಬರನ್ನು ಕ್ರೂರವಾಗಿ ಕೊಂದು ಸುಟ್ಟುಹಾಕಲಾಗಿದೆ. ಆಕೆಗೆ ಸುಮಾರು 20 ರಿಂದ 25 ವರ್ಷ ಇರಬಹುದು" ಎಂದು ಶಾದ್‌ನಗರದ ಎಸಿಪಿ, ವಿ ಸುರೇಂದರ್ ಹೇಳಿದರು.


ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶ್ರೀಧರ್ ರೆಡ್ಡಿ ಮೃತ ದೇಹ ಅವರ ಮಗಳದ್ದೆ ಎಂದು ಗುರುತಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಗಾಗಿ ಸ್ಥಳಕ್ಕೆ ತಲುಪಿದ್ದು, ಘಟನೆಯ ಜಾಡನ್ನು ಬೇಧಿಸಲು ಪ್ರಯತ್ನಿಸುತ್ತಿದ್ದಾರೆ. ಸುಳಿವುಗಳಿಗಾಗಿ ಹತ್ತಿರದ ಟೋಲ್ ಗೇಟ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.