CBI vs Mamata: ಮಮತಾ ಬ್ಯಾನರ್ಜಿ ಬೆಂಬಲಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ಪಶ್ಚಿಮ ಬಂಗಾಳದ ಪರಿಸ್ಥಿತಿಯೂ ತುರ್ತು ಪರಿಸ್ಥಿತಿಯಂತಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿರುದ್ಧ ಸಿಬಿಐ ಕೈಗೊಳ್ಳಲು ಮುಂದಾದ ತನಿಖೆಯನ್ನು ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಮ್ಮಿಕೊಂಡಿರುವ ಸತ್ಯಾಗ್ರಹಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಬೆಂಬಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪಶ್ಚಿಮ ಬಂಗಾಳದಲ್ಲಿ ಓರ್ವ ಪೋಲಿಸ್ ಕಮೀಷನರ್ ಅನ್ನು ಸಿಬಿಐ ಪೊಲೀಸರು ಬಂಧಿಸಲು ಮುಂದಾಗುವುದು ಮತ್ತು ಇತರ ಬೆಳವಣಿಗೆಗಳು ನಿಜಕ್ಕೂ ಆಘಾತವಾಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶವು ಇದೇ ರೀತಿಯ ಅಸಂವಿಧಾನಿಕ ಸನ್ನಿವೇಶಗಳನ್ನು ಎದುರಿಸಿತ್ತು. ಈಗ ಪಶ್ಚಿಮ ಬಂಗಾಳದ ಪರಿಸ್ಥಿತಿಯೂ ತುರ್ತು ಪರಿಸ್ಥಿತಿಯಂತಾಗಿದೆ. ಪ್ರಜಾಪ್ರಭುತ್ವ ಉಳಿಸಿ ಎಂದಿದ್ದಾರೆ.
ಏತನ್ಮಧ್ಯೆ, ದೇಶದ ಹಲವು ರಾಜಕೀಯ ನಾಯಕರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ 'ಪ್ರಜಾಪ್ರಭುತ್ವ ಉಳಿಸಿ' ಹೋರಾಟಕ್ಕೆ ಬೆಂಬಲಿಸಿದ್ದಾರೆ.