ನವದೆಹಲಿ: ರಫೇಲ್ ತೀರ್ಪಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ವತಃ ಸುಪ್ರೀಂ ಕೋರ್ಟ್ 'ಚೌಕಿದಾರ್ ಚೋರ್ ಹೈ'  ಎಂದು ತೀರ್ಪು ನೀಡಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಯಾಗಿದೆ.


COMMERCIAL BREAK
SCROLL TO CONTINUE READING

ರಾಹುಲ್ ಗಾಂಧಿ ವಿರುದ್ಧ ಇಂದು ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿರುವ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಏಪ್ರಿಲ್ 30ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಜೊತೆಗೆ ರಾಫೆಲ್ ತೀರ್ಪಿನ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯೂ ಅಂದೇ ನಡೆಯಲಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಏಪ್ರಿಲ್‌ 22ರೊಳಗೆ ವಿವರಣೆ ನೀಡುವಂತೆ ರಾಹುಲ್‌ ಗಾಂಧಿ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು. ಅದರಂತೆ ರಾಹುಲ್ ಸೋಮವಾರ ಅಫಿಡವಿಟ್‌ ಸಲ್ಲಿಸಿ, ''ಅದು ರಾಜಕೀಯ ಘೋಷಣೆಯಾಗಿತ್ತಷ್ಟೇ… ಚುನಾವಣೆ ಪ್ರಚಾರದ ಬಿಸಿಯಲ್ಲಿ ನಾನು ಹೇಳಿಕೆ ನೀಡಿದ್ದೆ. ನನ್ನ ರಾಜಕೀಯ ಎದುರಾಳಿಗಳು ಈ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿದ್ದಾರೆ'' ಎಂದು ರಾಹುಲ್ ಗಾಂಧಿ ನಿನ್ನೆ ಸುಪ್ರೀಂ ಕೋರ್ಟ್ ಬಳಿ ಸ್ಪಷ್ಟನೆ ನೀಡಿ, ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು.


ಆದರೆ ಇಂದು ನಡೆದ ವಿಚಾರಣೆ ವೇಳೆ ಮೀನಾಕ್ಷಿ ಲೇಖಿ ಅವರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೊಹ್ಟಗಿ, ರಾಹುಲ್ ಗಾಂಧಿ ಸಲ್ಲಿಸಿರುವ ಅಫಿಡವಿಟ್ ಕೇವಲ ಹೇಳಿಕೆಯಾಗಿದ್ದು, ಕ್ಷಮೆ ಕೇಳಿದಂತೆ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡುವಂತೆ ಮನವಿ ಮಾಡಿದರು. ಈ ಬೆನ್ನಲ್ಲೇ ಕೋರ್ಟ್ ರಾಹುಲ್ ಗಾಂಧಿಗೆ ನ್ಯಾಯಾಲಯ ನಿಂದನೆ ನೋಟಿಸ್ ಜಾರಿ ಮಾಡಿದೆ.