ನವದೆಹಲಿ: ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿ, ರಾಜ್ಯ ಸರ್ಕಾರವು ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದರು.


COMMERCIAL BREAK
SCROLL TO CONTINUE READING

'ವೈಎಸ್ಆರ್ಸಿಪಿ ಸರ್ಕಾರ ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಇತರ ಪಕ್ಷಗಳ ಮುಖಂಡರ ಮೇಲೆ ಅನಗತ್ಯ ಮತ್ತು ಕಾನೂನು ಬಾಹಿರ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಪೊಲೀಸರು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ನಾನು ಒಳ್ಳೆಯವರಿಗೆ ಒಳ್ಳೆಯವನು. ಆದರೆ ಜಗನ್ ಸೈಕೋನಂತೆ ವರ್ತಿಸುತ್ತಿದ್ದಾರೆ ಎಂದು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.


"ವೈಎಸ್ಆರ್ಸಿಪಿ ಆಡಳಿತವು ಅತ್ಯಂತ ಕೆಟ್ಟದಾಗಿದೆ.ಪಕ್ಷದ ನಾಯಕರು 'ಜೆ ಟ್ಯಾಕ್ಸ್' (ಜಗನ್ ತೆರಿಗೆ) ವಸೂಲಿ ಮಾಡುತ್ತಿದ್ದಾರೆ. ನಾನು ಅನೇಕ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ ಇವರಂತಹ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಸರ್ಕಾರ ತನ್ನ ಸೊಕ್ಕಿನ ಮನೋಭಾವವನ್ನು ಬದಲಾಯಿಸಬೇಕೆಂದು ನಾನು ಎಚ್ಚರಿಸುತ್ತೇನೆ. ಈ ಸರ್ಕಾರ ನಮ್ಮ ಪಕ್ಷದ ಮುಖಂಡರನ್ನು ಗುರಿಯಾಗಿಸಿಕೊಂಡಿದೆ. ಅದು ನ್ಯಾಯ ಸಮ್ಮತವಲ್ಲ 'ಎಂದು ನಾಯ್ಡು ಹೇಳಿದರು.


ಜಗನ್ ರೆಡ್ಡಿ ಅವರ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಕಳೆದ ನಾಲ್ಕು ತಿಂಗಳುಗಳಲ್ಲಿ, ಟಿಡಿಪಿ ಪಕ್ಷವು ಆಡಳಿತ ಪಕ್ಷದ ಕಾರ್ಯಕರ್ತರ ದಾಳಿಗೆ ಒಳಗಾಗುತ್ತಿದ್ದಾರೆ.ಇದರಿಂದಾಗಿ ಇದುವರೆಗೆ ಪಕ್ಷದ ಎಂಟು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಸುಮಾರು 500 ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಟಿಡಿಪಿ ಹೇಳಿದೆ.