ನವದೆಹಲಿ: ಕೇರಳದ ಮಲಪ್ಪುರಂನಲ್ಲಿ ಸ್ಫೋಟಕ ಸೇವಿಸಿ ಆನೆ ಸಾವಿಗೀಡಾದ ಘಟನೆಯ ನೆನಪು ಮಾಸುವ ಮುನ್ನವೇ ಇದೀಗ ಹಿಮಾಚಲ ಪರದೇಶದಲ್ಲಿ ಅಂತಹುದೇ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.. ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಜಾಂಡುಟ್ಟಾ ಪ್ರದೇಶದಲ್ಲಿ ದುರುಳರು ಆಹಾರದ ಚೆಂಡನ್ನು ತಯಾರಿಸಿ ಅದರಲ್ಲಿ ಸ್ಫೋಟಕಗಳನ್ನಿಟ್ಟು ಗರ್ಭಿಣಿ ಅಸುವಿಗೆ ತಿನ್ನಿಸಿದ್ದಾರೆ. ಇದರಿಂದ ಸ್ಫೋಟಕ ಹಸುವಿನ ಬಾಯಿಯಲ್ಲಿ ಸ್ಫೋಟಗೊಂಡು ಹಸು ತೀವ್ರ ಗಾಯಗೊಂಡಿದೆ. ಘಟನೆಯ ಕುರಿತಾದ ವಿಡಿಯೋ ಅನ್ನು ಹಸುವಿನ ಮಾಲೀಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಘಟನೆಯ ಬಳಿಕ ಪ್ರದೇಶದಲ್ಲಿ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ.


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ಕೇರಳದ ಮಲಪ್ಪುರಂನಲ್ಲಿ ಕಿಡಿಗೇಡಿಗಳು ಗರ್ಭಿಣಿ ಆನೆಗೆ ಅನಾನಸ್ ಹಣ್ಣಿನಲ್ಲಿ ಪಟಾಕಿಗಳನ್ನು ತುಂಬಿ ಸೇವಿಸಲು ನೀಡಿದ್ದರು. ಇರರಿಂದ ಆನೆಯ ಬಾಯಿ ಮತ್ತು ದವಡೆಗೆ ತೀವ್ರವಾಗಿ ಗಾಯಗಳಾಗಿದ್ದವು.


ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೆಣ್ಣು ಆನೆ ಬಳಿಕ ವೆಲಿಯಾರ್ ನದಿ ತಲುಪಿತ್ತು, ಅಲ್ಲಿ ಮೂರು ದಿನಗಳ ಕಾಲ ನದಿ ನೀರಿನಲ್ಲಿ ತನ್ನ ಮುಖವನ್ನು ಮುಳುಗಿಸಿ ನಿಂತಿದ್ದಳು. ಮೂರು ದಿನಗಳ ಬಳಿಕ ಆನೆ ಮತ್ತು ಆಕೆಯ ಗರ್ಭದಲ್ಲಿದ್ದ ಮರಿ ಆನೆ ಅಸು ನೀಗಿದ್ದವು. ಈ ಘಟನೆಯ ಬಳಿಕ ಸ್ಥಳೀಯರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಪ್ರಕರಣದಲ್ಲಿ ಸಂಪೂರ್ಣ ತನಿಖೆಗೆ ಕೇರಳ ಸರ್ಕಾರ ಆದೇಶಿಸಿದೆ. ಅಷ್ಟೇ ಅಲ್ಲ ಪರಿಸರ ಇಲಾಖೆ ಕೂಡ ಈ ಪ್ರಕರಣದಲ್ಲಿ ಖುದ್ದಾಗಿ ಹಸ್ತಕ್ಷೇಪ ಮಾಡಿದೆ


ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಆತನ ವಿಚಾರಣೆಯ ಬಳಿಕ ಮಾಹಿತಿ ನೀಡಿರುವ ಅರಣ್ಯ ಇಲಾಖೆಯ ಸಚಿವ ಕೆ. ರಾಜು, ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು , ಅವರನ್ನೂ ಕೂಡ ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದಿದ್ದಾರೆ. ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಈ ತನಿಖೆಯನ್ನು ನಡೆಸುತ್ತಿದ್ದಾರೆ.