ನವ ದೆಹಲಿ: ತಮಿಳುನಾಡಿನ ದಕ್ಷಿಣ ಭಾಗಗಳಲ್ಲಿ ಒಕ್ಹಿ ಚಂಡಮಾರುತದಿಂದ ಉಂಟಾಗುತ್ತಿರುವ ಹಾನಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಮುಖ್ಯಮಂತ್ರಿ ಪಳನಿ ಸ್ವಾಮಿ ಅವರಿಗೆ ಕರೆ ಮಾಡಿ ಮಾರಣಾಂತಿಕವಾಗಿರುವ ಚಂಡಮಾರುತದ ಬಗ್ಗೆ ಮತ್ತು ರಾಜ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. 


COMMERCIAL BREAK
SCROLL TO CONTINUE READING

ಚಂಡಮಾರುತದಿಂದ ಉಂಟಾದ ಹಾನಿಗೆ ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ನೆರವು ದೊರೆಯಲಿದೆ ಎಂದು ಸಿಎಂ ಪಳನಿಸ್ವಾಮಿಯವರಿಗೆ ಪ್ರಧಾನಿ ಭರವಸೆ ನೀಡಿದರು.


ರಾಜ್ಯದ ಏಳು ಜಿಲ್ಲೆಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ವಿವಿಧ ಪರಿಹಾರ ಕಾರ್ಯಗಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ತಿಳಿಸಿದ ಸಿಎಂ ಪಳನಿಸ್ವಾಮಿ, ಸರ್ಕಾರ ತೆಗೆದುಕೊಂಡ ಕ್ರಮಗಳನ್ನೂ ಸಹ ಪಟ್ಟಿ ಮಾಡಿದ್ದಾರೆ. ಅಲ್ಲದೆ ಹಿರಿಯ ಸಚಿವರು ಮತ್ತು ಐಎಎಸ್ ಅಧಿಕಾರಿಗಳನ್ನು ಪರಿಹಾರ ಕಾರ್ಯವನ್ನು ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.


ಅಲ್ಲದೆ, ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ವಿವರವಾದ ಮೌಲ್ಯಮಾಪನ ನಡೆಸಿದ ಬಳಿಕ ಪರಿಹಾರ ಧನಕ್ಕಾಗಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದೂ ಅವರು ಪ್ರಧಾನ ಮಂತ್ರಿಗೆ ತಿಳಿಸಿದ್ದಾರೆ.


ರಾಜ್ಯದ ಕನ್ಯಾಕುಮಾರಿ ಮತ್ತು ತಿರುನೆಲ್ವೇಲಿ ಜಿಲ್ಲೆಗಳು ಚಂಡಮಾರುತದಿಂದ ತೀವ್ರವಾದ ಹಾನಿಗೊಳಗಾಗಿವೆ. 


ಈ ಚಂಡಮಾರುತದಿಂದ 1200 ಕ್ಕಿಂತಲೂ ಹೆಚ್ಚು ಜನರು ನಿರಾಶ್ರಿತರಾಗಿದ್ದು, ಅವರೆಲ್ಲರೂ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಏತನ್ಮಧ್ಯೆ, ಕನ್ಯಕುಮಾರಿಯಲ್ಲಿ ಕನಿಷ್ಠ 1,044 ಜನರು 16 ಪರಿಹಾರ ಶಿಬಿರಗಳಲ್ಲಿ ದಾಖಲಾಗಿದ್ದು, ತಿರುನಲ್ವೇಲಿಯ ಎರಡು ಶಿಬಿರಗಳಲ್ಲಿ 205 ಮಂದಿ ಇದ್ದಾರೆ.


ಅತಿಯಾಗಿ ಹಾನಿಗೊಳಗಾಗಿರುವ ಕನ್ಯಾಕುಮಾರಿ ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು, ಎರಡು ಎನ್ಡಿಆರ್ಎಫ್ ತಂಡಗಳು ಮತ್ತು ಏಳು ರಾಜ್ಯ ವಿಪತ್ತು ಪ್ರತಿಕ್ರಿಯೆ ಏಜೆನ್ಸಿಗಳನ್ನು ನೇಮಕ ಮಾಡಲಾಗಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.