ನವದೆಹಲಿ:ರಾಜ್ಯಸಭೆಯಲ್ಲಿ "ಪರಾರಿಯಾದ ಆರ್ಥಿಕ ಅಪರಾಧಿಗಳು" ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಈ ಮಾಹಿತಿ ನೀಡಿದ್ದಾರೆ. ಈ ಕುರಿತು ವರದಿ ನೀಡಿರುವ ಕೇಂದ್ರ ತನಿಖಾ ದಳ ನಮೂದಾಗಿರುವ ಒಟ್ಟು 66 ಪ್ರಕರಣಗಳ ಪೈಕಿ 51 ಘೋಷಿತ ಅಪರಾಧಿಗಳು ದೇಶಬಿಟ್ಟ ಪರಾರಿಯಾಗಿದ್ದಾರೆ ಎಂದು ಹೇಳಿದೆ. "ಈ ಪ್ರಕರಣಗಳಲ್ಲಿನ ಎಲ್ಲ ಆರೋಪಿಗಳು ವಂಚಿಸಿದ ಒಟ್ಟು ಮೊತ್ತವು 17,947.11 ಕೋಟಿ ರೂ.(ಅಂದಾಜು)” ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿದೆ ಎಂದು ಸಚಿವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ನಿದರ್ಶನಗಳಲ್ಲಿ ಎಷ್ಟು ರಿಯಾಯಿತಿ ಮತ್ತು ಸಾಲಗಳನ್ನು ನೀಡಲಾಗಿದೆ ಎಂಬ ಬಗ್ಗೆಯೂ ಅವರನ್ನು ಕೇಳಲಾಗಿದ್ದು, “ಸಾಲಗಳನ್ನು ಮರುರಚಿಸಲು ನೀಡಲಾಗಿರುವ ರಿಯಾಯಿತಿಗಳ ಅಡಿ ಈ ಮೊದಲೇ ನೀಡಿದ ಸಾಲಗಳ ಮೇಲಿನ ನಷ್ಟವನ್ನು ಸರಿದೂಗಿಸಲು ಅವುಗಳನ್ನು NPA ಗಳಾಗಿ ಮರು ವರ್ಗೀಕರಿಸಿ ಒದಗಿಸಲಾಗಿದೆ" ಎಂದು ಠಾಕೂರ್ ತಿಳಿಸಿದ್ದಾರೆ.


"ಸಾರ್ವಜನಿಕ ವಲಯದ ಬ್ಯಾಂಕುಗಳು ಈಗಾಗಲೇ ಎನ್‌ಪಿಎಗಳನ್ನು ಗುರುತಿಸುವ ಮೂಲಕ ಕ್ಲೀನಿಂಗ್ ಪ್ರಕ್ರಿಯೆ ಪ್ರಾರಂಭಿಸಿದ್ದು, ನಿರೀಕ್ಷಿತ ನಷ್ಟವನ್ನು ಒದಗಿಸುತ್ತಿವೆ" ಎಂದು ಸಚಿವರು ಇದೇ ವೇಳೆ ಹೇಳಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಡಿ ಹಾಗೂ ಸಿಬಿಐ ನ್ಯಾಯಾಲಯದಲ್ಲಿ ಸೂಕ್ತ ಅರ್ಜಿ ಸಲ್ಲಿಸಿ, ದಾಖಲೆಗಳನ್ನು ಒದಗಿಸಿದ್ದು, ಅವು ವಿಚಾರಣೆ ಹಂತದಲ್ಲಿವೆ ಎಂದು ಸಚಿವರು ಹೇಳಿದ್ದಾರೆ.


ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ(CBIC) ಅಕ್ರಮವಾಗಿ ದೇಶ ತೊರೆದ 6 ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಬಗ್ಗೆ ವರದಿ ನೀಡಿದ್ದು, ಜಾರಿ ನಿರ್ದೇಶನಾಲಯ ಒಟ್ಟು 10 ಮಂದಿ ವಿರುದ್ಧ 2018ರ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಜೊತೆಗೆ ಒಟ್ಟು 8 ಜನರ ವಿರುದ್ಧ ಇಡಿ ಗಡಿಪಾರು ಕೋರಿಕೆ ಸಲ್ಲಿಸಿದ್ದು, ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಿದ ಎಂದು ಅವರು ಮಾಹಿತಿ ನೀಡಿದ್ದಾರೆ.