ವೆಲ್ಲೂರು ಸಂಸದೀಯ ಕ್ಷೇತ್ರದ ಲೋಕಸಭಾ ಚುನಾವಣೆ ರದ್ದು
ತಮಿಳುನಾಡಿನ ವೆಲ್ಲೂರು ಸಂಸದೀಯ ಕ್ಷೇತ್ರದ ಲೋಕಸಭಾ ಚುನಾವಣೆಯನ್ನು ರದ್ದುಪಡಿಸಲು ಕೋರಿ ಚುನಾವಣಾ ಆಯೋಗವು ಎಪ್ರಿಲ್ 14 ರಂದು ಸಲ್ಲಿಸಿದ್ದ ಶಿಫಾರಸ್ಸುಗಳನ್ನು ರಾಷ್ಟ್ರಪತಿಗಳು ಸ್ವೀಕರಿಸಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
ನವದೆಹಲಿ: ತಮಿಳುನಾಡಿನ ವೆಲ್ಲೂರು ಸಂಸದೀಯ ಕ್ಷೇತ್ರದ ಲೋಕಸಭಾ ಚುನಾವಣೆಯನ್ನು ರದ್ದುಪಡಿಸಲು ಕೋರಿ ಚುನಾವಣಾ ಆಯೋಗವು ಎಪ್ರಿಲ್ 14 ರಂದು ಸಲ್ಲಿಸಿದ್ದ ಶಿಫಾರಸ್ಸುಗಳನ್ನು ರಾಷ್ಟ್ರಪತಿಗಳು ಸ್ವೀಕರಿಸಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
ಆ ಮೂಲಕ ಎರಡನೇ ಹಂತದಲ್ಲಿ ಎಪ್ರಿಲ್ 18 ರಂದು ನಡೆಯಬೇಕಾಗಿದ್ದ ವೆಲ್ಲೂರು ಕ್ಷೇತ್ರದ ಚುನಾವಣೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಚುನಾವಣಾ ಆಯೋಗವು ಈ ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದೆ. ಆದ್ದರಿಂದ ಇಲ್ಲಿ ಚುನಾವಣೆ ನಡೆಸುವುದಕ್ಕೆ ತಡೆಯಾಜ್ಞೆ ಕೋರಿ ರಾಷ್ಟ್ರಪತಿಗೆ ಹಲವು ಶಿಫಾರಸ್ಸುಗಳನ್ನು ಮಾಡಿತ್ತು. ಈ ಆಯೋಗ ಮಾಡಿರುವ ಎಲ್ಲ ಶಿಫಾರಸ್ಸುಗಳಿಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಕ್ಷೇತ್ರದಲ್ಲಿ ಎಪ್ರಿಲ್ 18 ರಂದು ನಡೆಯಬೇಕಾಗಿದ್ದ ಚುನಾವಣೆ ರದ್ದುಗೊಂಡಂತಾಗಿದೆ.
ಕೆಲವು ವಾರಗಳ ಹಿಂದೆ ವೆಲ್ಲೂರ್ನಲ್ಲಿ ಡಿಎಂಕೆ ಅಭ್ಯರ್ಥಿ ಕಚೇರಿಯಿಂದ ಬೃಹತ್ ಪ್ರಮಾಣದಲ್ಲಿ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಏಪ್ರಿಲ್ 10 ರಂದು ಆದಾಯ ತೆರಿಗೆ ಇಲಾಖೆಯ ವರದಿಯ ಆಧಾರದ ಮೇಲೆ ಜಿಲ್ಲಾ ಪೊಲೀಸ್ ಡಿಎಂಕೆ ಅಭ್ಯರ್ಥಿ ಕತೀರ್ ಆನಂದ್ ಮತ್ತು ಇಬ್ಬರು ಪಕ್ಷದ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದೆ ಎಂದು ಪಿಟಿಐ ವರದಿ ಮಾಡಿದೆ.