ನವದೆಹಲಿ: ಜನಸಮೂಹ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದ ಇತಿಹಾಸಕಾರ ರಾಮಚಂದ್ರ ಗುಹಾ, ಮಣಿರತ್ನಂ ಮತ್ತು ಅಪರ್ಣ ಸೇನ್ ಸೇರಿದಂತೆ ಸುಮಾರು 50 ಗಣ್ಯರ ವಿರುದ್ಧ ಬಿಹಾರದ ಮುಜಾಫರ್ಪುರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.


COMMERCIAL BREAK
SCROLL TO CONTINUE READING

ಸ್ಥಳೀಯ ನ್ಯಾಯವಾದಿ ಸುಧೀರ್ ಕುಮಾರ್ ಓಜಾ ಅವರು ಸಲ್ಲಿಸಿದ್ದ ಅರ್ಜಿಯ ಮೇಲೆ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸೂರ್ಯ ಕಾಂತ್ ತಿವಾರಿ ಎರಡು ತಿಂಗಳ ಹಿಂದೆ ಆದೇಶ ಹೊರಡಿಸಿದ ನಂತರ ಈ ಪ್ರಕರಣ ದಾಖಲಾಗಿತ್ತು. 'ಆಗಸ್ಟ್ 20 ರಂದು ಸಿಜೆಎಂ ಈ ಆದೇಶವನ್ನು ಅಂಗೀಕರಿಸಿದೆ, ರಶೀದಿಯ ಮೇರೆಗೆ ನನ್ನ ಅರ್ಜಿಯನ್ನು ಸ್ವೀಕರಿಸಿ, ಇಂದು ಸದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ' ಎಂದು ಓಜಾ ಹೇಳಿದರು.


ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಸಹಿ ಮಾಡಿದ 50 ಗಣ್ಯರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಈ ಗಣ್ಯರ ವಿರುದ್ಧ ದೂರು ದಾಖಲಿಸಿ  ದೇಶದ ಚಿತ್ರಣಕ್ಕೆ ಧಕ್ಕೆ ತರುತ್ತಿದ್ದಾರೆ ಮತ್ತು ಪ್ರಧಾನಮಂತ್ರಿಯವರ ಅದ್ಭುತ ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸಿದ್ದಾರೆ ಜೊತೆಗೆ ಪ್ರತ್ಯೇಕತಾವಾದಿ ಪ್ರವೃತ್ತಿಯನ್ನು ಬೆಂಬಲಿಸುತ್ತಾರೆ ಎಂದು ಪ್ರಸ್ತಾಪಿಸಲಾಗಿದೆ. ಈಗ ಅವರ ವಿರುದ್ಧ ಪೋಲಿಸರು ದೇಶದ್ರೋಹ, ಸಾರ್ವಜನಿಕ ರಗಳೆ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು ಮತ್ತು ಶಾಂತಿ ಉಲ್ಲಂಘನೆಯನ್ನು ಉಂಟುಮಾಡುವ ಉದ್ದೇಶದಿಂದ ಅವಮಾನಿಸುವುದು ಸೇರಿದಂತೆ ಐಪಿಸಿಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 


ಈ ವರ್ಷದ ಜುಲೈನಲ್ಲಿ ಚಲನಚಿತ್ರ ನಿರ್ಮಾಪಕರಾದ ಮಣಿರತ್ನಂ, ಅನುರಾಗ್ ಕಶ್ಯಪ್, ಶ್ಯಾಮ್ ಬೆನೆಗಲ್, ನಟ ಸೌಮಿತ್ರಾ ಚಟರ್ಜಿ ಮತ್ತು ಗಾಯಕ ಶುಭಾ ಮುದಗಲ್ ಸೇರಿದಂತೆ 49 ಮಂದಿ ಪ್ರಖ್ಯಾತ ವ್ಯಕ್ತಿಗಳು ಈ ಪತ್ರವನ್ನು ಬರೆದಿದ್ದಾರೆ. ದೇಶದಲ್ಲಿ ಮುಸ್ಲಿಮರು, ದಲಿತರು ಮತ್ತು ಇತರ ಅಲ್ಪಸಂಖ್ಯಾತರ ಹತ್ಯೆಯನ್ನು ತಕ್ಷಣವೇ ನಿಲ್ಲಿಸಬೇಕು 'ಭಿನ್ನಾಭಿಪ್ರಾಯವಿಲ್ಲದೆ ಪ್ರಜಾಪ್ರಭುತ್ವವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.