ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಿಸಿದ ಹಿನ್ನೆಲೆ ಇಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಈ ಪ್ಯಾಕೇಜ್ ನ ವಲಯ ಆಧಾರಿತ ಘೋಷಣೆ ಮಾಡಿದ್ದಾರೆ. ಇದೇ ವೇಳೆ, ಕರೋನಾ ಬಿಕ್ಕಟ್ಟಿನಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗಿರುವ ಎಂಎಸ್‌ಎಂಇ ಕ್ಷೇತ್ರಕ್ಕಾಗಿ ಹಣಕಾಸು ಸಚಿವರು ಬೃಹತ್ ಘೋಷಣೆಯನ್ನು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ದೇಶದ ಬೆನ್ನೆಲುಬು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ. ಈ ವಲಯದಲ್ಲಿ 12 ಕೋಟಿ ಜನರು ಉದ್ಯೋಗದಲ್ಲಿದ್ದಾರೆ. 20 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್‌ನಲ್ಲಿ ಈ ಕ್ಷೇತ್ರಕ್ಕೆ 3 ಲಕ್ಷ ಕೋಟಿ ಸಾಲ ನೀಡಲಾಗುವುದು ಎಂದು ಸಿತಾರಾಮನ್ ಘೋಷಿಸಿದ್ದಾರೆ. ಜೊತೆಗೆ ಈ ಸಾಲ ಒಟ್ಟು ನಾಲ್ಕು ವರ್ಷಗಳ ಅವಧಿಗೆ ನೀಡಲಾಗುತ್ತಿದ್ದು, ಮೊದಲಿನ 12 ತಿಂಗಳುಗಳ ಕಾಲ ಅಸಲು ಮರುಪಾವತಿ ಕೇಳಲಾಗುವುದಿಲ್ಲ ಎಂದು ಹೇಳಿದ್ದಾರೆ.


ಅಷ್ಟೇ ಅಲ್ಲ, ಅಲ್ಲದೆ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಎಂಎಸ್‌ಎಂಇಗಳಿಗೆ, ಫಂಡ್ ಆಫ್ ಫಂಡ್ಸ್ ಯೋಜನೆಯಡಿ  50,000 ಕೋಟಿ ರೂ. ಇಕ್ವಿಟಿ ಇಂಗ್ಜೆಟ್ ಮಾಡಿ ಅವುಗಳನ್ನು ದೊಡ್ಡ ಗಾತ್ರಕ್ಕೆ ಬೆಳೆಯಲು ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.


ಬದಲಾಗಿದೆ MSME ಪರಿಭಾಷೆ ಅಥವಾ ವ್ಯಾಖೆ
ಇದೇವೇಳೆ ಒತ್ತಡಕ್ಕೆ ಸಿಲುಕಿರುವ MSMEಗಳಿಗೆ 20 ಸಾವಿರ ಕೋಟಿ ರೂ.ಗಳ ಅನುದಾನ ನೀಡಲಾಗಿದೆ.2 ಲಕ್ಷಕ್ಕಿಂತ ಅಧಿಕ ಒತ್ತಡಕ್ಕೆ ಒಳಗಾಗಿರುವ MSMEಗಳಿಗೆ ಇದ್ರರಿಂದ ಲಾಭ ಸಿಗಲಿದೆ. ಕೇಂದ್ರ ಹಣಕಾಸು ಸಚಿವೆ MSME ಸೆಕ್ಟರ್ ಗೆ ಮಾಡಿರುವ ಒಟ್ಟು ಘೋಷಣೆಗಳಲ್ಲಿ ಮಹತ್ವದ ಘೋಷಣೆ ಎಂದರೆ MSMEಯ ಪರಿಭಾಷೆ ಅಥವಾ ವ್ಯಾಖ್ಯೆ ಬದಲಾವಣೆ.


ತಮ್ಮ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವ್ಯಾಖ್ಯಾನವನ್ನು ಬದಲಾಯಿಸಿ, ಹೂಡಿಕೆಯ ಮಿತಿಯನ್ನು ಪರಿಷ್ಕರಿಸಲಾಗುವುದು ಎಂದಿದ್ದಾರೆ. ಉತ್ಪಾದನಾ ವಲಯ ಮತ್ತು ಸೇವಾ ವಲಯದ ನಡುವಿನ ಅಂತರವನ್ನು ತೊಡೆದು ಹಾಕಲು ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ಮಾಡಲು ಕಾನೂನನ್ನು ಬದಲಾಯಿಸಲಾಗುವುದು ಎಂದಿದ್ದಾರೆ.


ಹಣಕಾಸು ಸಚಿವರ ಹೊಸ ಘೋಷಣೆಯ ಬಳಿಕ ಇದೀಗ ಸೂಕ್ಷ್ಮ ಉದ್ಯಮದಲ್ಲಿ ಹೂಡಿಕೆಯ ಮಿತಿಯನ್ನು 1 ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು, ವಾರ್ಷಿಕ ವಹಿವಾಟನ್ನು 5 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ.ಇದೇ ರೀತಿ ಸಣ್ಣ ಉದ್ಯಮಗಳಲ್ಲಿ ಹೂಡಿಕೆಯ ಮಿತಿಯನ್ನು 10 ಕೋಟಿಗೆ ಮತ್ತು ವಾರ್ಷಿಕ ವಹಿವಾಟನ್ನು 50 ಕೋಟಿಗೆ ಹೆಚ್ಚಿಸಲಾಗಿದೆ. ಇದೆ ರೀತಿ ಮಧ್ಯಮ ಉದ್ಯಮದಲ್ಲಿಯೂ ಕೂಡ ಹೂಡಿಕೆ ಮಿತಿಯನ್ನು 20 ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು, ವಾರ್ಷಿಕವಾಗಿ ಅದು 100 ಕೋಟಿ ರೂ.ಗಳ ವಹಿವಾಟು ನಡೆಸಬಹುದಾಗಿದೆ. ಉತ್ಪಾದನಾ ಮತ್ತು ಸೇವಾ ವಲಯ ಎರಡೂ ಕ್ಷೇತ್ರಗಳಿಗೆ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಇದರ ಜೊತೆಗೆ 200 ಕೋಟಿ ರೂ.ಒಳಗಿನ ಟೆಂಡರ್ ಸಲ್ಲಿಸಲು ಸ್ಥಳೀಯ ಕಂಪನಿಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದ್ದು, ಜಾಗತಿಕ ಕಂಪನಿಗಳಿಗೆ ಟೆಂಡರ್ ಸಲ್ಲಿಸಲು ಅವಕಾಶ ಇಲ್ಲ ಎಂದೂ ಸಹ ನಿರ್ಮಲಾ ಸಿತಾರಾಮನ್ ಹೇಳಿದ್ದಾರೆ.