ನವದೆಹಲಿ: ಇತ್ತೀಚಿಗೆ ಬಿಡುಗಡೆಯಾದ ಕೇಂದ್ರ ಅಂಕಿ ಅಂಶ ಕಚೇರಿಯ (ಸಿಎಸ್‌ಒ) ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಏಪ್ರಿಲ್-ಜೂನ್ 2019 ರ ಭಾರತದ ಬೆಳವಣಿಗೆಯ ದರವು ಕಳೆದ ವರ್ಷದ ಇದೇ ಅವಧಿಯಲ್ಲಿನ ಶೇಕಡಾ 8 ಕ್ಕೆ ಹೋಲಿಸಿದರೆ 5 ಕ್ಕೆ ಇಳಿದಿದೆ. ಆ ಮೂಲಕ ಭಾರತದ ಆರ್ಥಿಕ ಪರಿಸ್ಥಿತಿ ಈಗ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವುದು ಸ್ಪಷ್ಟವಾಗಿದೆ.



COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಮೌನ ಮುರಿದಿರುವ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೋದಿ ಸರ್ಕಾರ ದ್ವೇಷದ ರಾಜಕಾರಣವನ್ನು ಬಿಟ್ಟು ಬುದ್ದಿವಂತ ಮನಸ್ಸುಗಳನ್ನು ತಲುಪುವ ಮೂಲಕ ಈ ಸಮಸ್ಯೆಗೆ ಇತ್ಯರ್ಥ ಕಂಡುಕೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.


"ಇಂದು ಆರ್ಥಿಕತೆಯ ಸ್ಥಿತಿ ತೀವ್ರ ಕಳವಳ ಸೃಷ್ಟಿಸಿದೆ. ಕಳೆದ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ದರವು 5% ದೀರ್ಘಕಾಲದ ನಿಧಾನಗತಿಯ ಮಧ್ಯದಲ್ಲಿತ್ತು ಎನ್ನುವುದನ್ನು ತೋರಿಸುತ್ತದೆ. ಭಾರತವು ಹೆಚ್ಚು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ.ಆದರೆ ನಿರ್ವಹಣೆಯಲ್ಲಿ ಮೋದಿ ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ಈ ಮಂದಗತಿಗೆ ಕಾರಣವಾಗಿದೆ' ಎಂದು ಸಿಂಗ್ ಹೇಳಿದರು.



'ಉತ್ಪಾದನಾ ಕ್ಷೇತ್ರದ ಬೆಳವಣಿಗೆ 0.6% ರಷ್ಟಿದೆ ಎಂಬುದು ನಿಜಕ್ಕೂ ದುಃಖಕರವಾಗಿದೆ. ಮಾನವ ನಿರ್ಮಿತ ಪ್ರಮಾದಗಳು ಮತ್ತು ತರಾತುರಿಯಲ್ಲಿ ಜಾರಿಗೆ ತಂದ ಜಿಎಸ್‌ಟಿಯಿಂದ ನಮ್ಮ ಆರ್ಥಿಕತೆಯು ಇನ್ನೂ ಚೇತರಿಸಿಕೊಂಡಿಲ್ಲ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.


ಭಾರತಕ್ಕೆಈ ಹಾದಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಆದ್ದರಿಂದ, ಮಾನವ ನಿರ್ಮಿತ ಬಿಕ್ಕಟ್ಟಿನಿಂದ ನಮ್ಮ ಆರ್ಥಿಕತೆಯನ್ನು ಹೊರಹಾಕಲು ಕೀಳು ಮಟ್ಟದ ದ್ವೇಷದ ರಾಜಕೀಯವನ್ನು ಬದಿಗಿಟ್ಟು ಎಲ್ಲಾ ವಿವೇಕದ ಧ್ವನಿಗಳು ಮತ್ತು ಆಲೋಚನಾ ಮನಸ್ಸುಗಳನ್ನು ತಲುಪಬೇಕೆಂದು ಸರ್ಕಾರವನ್ನು ಕೋರುತ್ತೇನೆ' ಎಂದು ಮನಮೋಹನ್ ಸಿಂಗ್ ಮೋದಿ ಸರ್ಕಾರವನ್ನು ಕೋರಿದ್ದಾರೆ.