ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಕ್ ಪರಿಸ್ಥಿತಿಯ ಕುರಿತು CDS ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಭಾರತೀಯ ಸೇನೆಯ ಮೂರು ವಿಭಾಗದ ಸೇನಾ ಮುಖ್ಯಸ್ಥರ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ LAC ಬಳಿ ಚೀನಾ ಸೇನೆ ಕೈಗೊಳ್ಳುವ ಯಾವುದೇ ಆಕ್ರಮಣಕಾರಿ ಕೃತ್ಯಕ್ಕೆ ತಕ್ಕ ಉತ್ತರ ನೀಡಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ರಕ್ಷಣಾ ಸಚಿವರು ನಡೆಸಿರುವ ಈ ಉನ್ನತ ಮಟ್ಟದ ಪರಿಶೀಲನಾ ಸಭೆಯ ಬಳಿಕ ಮೂಲಗಳು ಈ ಮಾಹಿತಿ ನೀಡಿವೆ.


COMMERCIAL BREAK
SCROLL TO CONTINUE READING

ಮೂಲಗಳ ಪ್ರಕಾರ, ಪೂರ್ವ ಲಡಾಕ್ ಮತ್ತು ಇತರ ಪ್ರಾಂತ್ಯಗಳಲ್ಲಿ ಚೀನಾ ನಡೆಸುತ್ತಿರುವ ಯಾವುದೇ ಕಿಡಿಗೇಡಿತನಕ್ಕೆ ತಕ್ಕ ಉತ್ತರ ನೀಡಲು ಭಾರತೀಯ ಪಡೆಗಳನ್ನು ಸಂಪೂರ್ಣವಾಗಿ ಸಿದ್ಧಪಡಿಸುವಂತೆ ಆದೇಶ ನೀಡಲಾಗಿದೆ. ಭೂಮಿಯ ಗಡಿಭಾಗದಲ್ಲಿ, ವಾಯು ಮಾರ್ಗದಲ್ಲಿ ಹಾಗೂ ಸಮುದ್ರ ಮಾರ್ಗದಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳ ತೀವ್ರ ನಿಗಾ ವಹಿಸುವಂತೆ ಮೂರೂ ಸೇನೆಯ ಉನ್ನತ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.


ಮೂರು ದಿನಗಳ ರಷ್ಯಾ ಯಾತ್ರೆಗೆ ತೆರಳಲಿರುವ ರಕ್ಷಣಾ ಸಚಿವರು
ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಆಯೋಜಿಸಲಾಗುತ್ತಿರುವ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ತಮ್ಮ ಮೂರುದಿನಗಳ ರಷ್ಯಾ ಯಾತ್ರೆ ಆರಂಭಿಸಲಿದ್ದಾರೆ. ಎರಡನೆಯ ವಿಶ್ವಯುದ್ಧದ ವೇಳೆ ಜರ್ಮನಿಯ ಮೇಲೆ ಸೋವಿಯತ್ ಒಕ್ಕೂಟ ಸಾಧಿಸಿರುವ ವಿಜಯದ 75ನೇ ವರ್ಷಾಚರಣೆಯ ಅಂಗವಾಗಿ ಈ ಪರೇಡ್ ನಡೆಸಲಾಗುತ್ತಿದೆ. ಭಾರತ ಹಾಗೂ ಚೀನಾ ದೇಶಗಳ ಮದ್ಯೆ ಹೆಚ್ಚಾಗುತ್ತಿರುವ ವೈಮನಸ್ಯದ ಹಿನ್ನೆಲೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ರಷ್ಯಾ ಭಾರಿ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಲಡಾಕ್ ನ ಪೂರ್ವ ಭಾಗದಲ್ಲಿರುವ ಗಲ್ವಾನ್ ಕಣಿವೆಯಲ್ಲಿ 15 ಜೂನ್ ರಂದು 20 ಭಾರತೀಯ ಸೈನಿಕರು ಹುತಾತ್ಮರಾಗಿರುವ ಹಿನ್ನೆಲೆ ಈ ಭೇಟಿ ಭಾರಿ ಮಹತ್ವಪಡೆದುಕೊಂಡಿದೆ.


ಮಾಸ್ಕೋದಲ್ಲಿ ನಡೆಸಲಾಗುತ್ತಿರುವ ಈ ಪರೇಡ್ ನಲ್ಲಿ ಭಾಗವಹಿಸಲು 75 ಸದಸ್ಯರ ಭಾರತೀಯ ಮಿಲಿಟರಿಯ ತುಕಡಿ ಈಗಾಗಲೇ ಮಾಸ್ಕೋ ತಲುಪಿದೆ. ಭಾರತೀಯ ಮೆರವಣಿಗೆ ತಂಡಕ್ಕೆ ಗ್ಯಾಲೆಂಟ್ ಸಿಖ್ ಲೈಟ್ ಇನ್ಫಂಟ್ರೀ ರೆಜಿಮೆಂಟ್‌ನ ಮೇಜರ್ ಶ್ರೇಯಾಂಕ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ. ಈ ರೆಜಿಮೆಂಟ್ ಎರಡನೆಯ ಮಹಾಯುದ್ಧದಲ್ಲಿ ಅಪ್ರತಿಮ ಧೈರ್ಯ ಪ್ರದರ್ಶಿಸಿತ್ತು ಜೊತೆಗೆ ನಾಲ್ಕು ಶೌರ್ಯ ಪ್ರಶಸ್ತಿಗಳು ಮತ್ತು ಎರಡು ಶೌರ್ಯ ಪ್ರಶಸ್ತಿಗಳನ್ನು ಪಡೆದಿತ್ತು. ಚೀನಾ ಸೇರಿದಂತೆ ಸುಮಾರು 11 ರಾಷ್ಟ್ರಗಳ ಸಶಸ್ತ್ರ ಪಡೆಗಳ ತುಕ್ಕಡಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ.