ನಾನು ಭಾರತಕ್ಕೆ ಬರುವ ಸುದ್ದಿ ಆಧಾರರಹಿತ: ಝಾಕಿರ್ ನಾಯ್ಕ್
ನಾನು ಭಾರತಕ್ಕೆ ಈಗಲೇ ಮರಳಿ ಬರುತ್ತಿಲ್ಲ. ಮರಳುತ್ತಿದ್ದೇನೆ ಎಂಬುದು ಸುಳ್ಳು ಎಂದು ವಿವಾದಿತ ಇಸ್ಲಾಂ ಮತ ಪ್ರಚಾರಕ ಝಾಕಿರ್ ನಾಯ್ಕ್ ಹೇಳಿದ್ದಾರೆ.
ನವದೆಹಲಿ: ನಾನು ಭಾರತಕ್ಕೆ ಈಗಲೇ ಮರಳಿ ಬರುತ್ತಿಲ್ಲ. ಮರಳುತ್ತಿದ್ದೇನೆ ಎಂಬುದು ಸುಳ್ಳು ಮತ್ತು ಆಧಾರಾ ರಹಿತ ಎಂದು ವಿವಾದಿತ ಇಸ್ಲಾಂ ಮತ ಪ್ರಚಾರಕ ಝಾಕಿರ್ ನಾಯ್ಕ್ ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಭಾರತದಲ್ಲಿ ತಮಗೆ ರಕ್ಷಣೆ ನೀಡಲಾಗುವುದು ಎಂದು ಸರ್ಕಾರ ಆಶ್ವಾಸನೆ ನೀಡುವವರೆಗೂ ಭಾರತಕ್ಕೆ ಬರುವುದಿಲ್ಲ. ಭಾರತ ಸರ್ಕಾರ ನ್ಯಾಯಯುತವಾಗಿ ನಡೆದುಕೊಳ್ಳುತ್ತದೆ ಎಂದೆನಿಸುತ್ತಿಲ್ಲ ಎಂದು ಝಾಕಿರ್ ತಿಳಿಸಿದ್ದಾರೆ.
ಈ ಮೊದಲು ಝಾಕಿರ್ ನಾಯ್ಕ್ ಮಲೇಷ್ಯಾದಿಂದ ಭಾರತಕ್ಕೆ ಹೊರಟಿದ್ದು, ಬುಧವಾರ ರಾತ್ರಿ ಭಾರತ ತಲುಪುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ತಮಗೆ ಮಲೇಶಿಯಾ ಸರ್ಕಾರದಿಂದ ಯಾವುದೇ ಮಾಹಿತ ದೊರೆತಿಲ್ಲ. ಇದರ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಎನ್ಐಎ ವಕ್ತಾರ ಅಲೋಕ್ ಮಿತ್ತಲ್ ಹೇಳಿಕೆ ನೀಡಿದ್ದರು.
ಢಾಕಾ ದಾಳಿ ನಡೆಸಿದ ಐಸಿಸ್ ಉಗ್ರರಿಗೆ ಪ್ರೇರಪಣೆ ನೀಡಿದ ಆರೋಪ ಎದುರಿಸುತ್ತಿರುವ ಝಾಕೀರ್ ನಾಯ್ಕ್ ವಿರುದ್ಧ ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನಾ ವಿರೋದಿ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದು, ಎನ್ಐಎ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ 2016 ರಿಂದ ಮಲೇಷ್ಯಾದ ಪುತ್ರಜಯದಲ್ಲಿ ನೆಲೆಸಿದ್ದು, ಭಾರತಕ್ಕೆ ಮರಳಿಲ್ಲ.