ನವದೆಹಲಿ: ದೇಶವನ್ನು ಮತ್ತು ಸಂವಿಧಾನದ ರಕ್ಷಣೆಗಾಗಿ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಕೊಲ್ಕತ್ತಾ ಪೊಲೀಸರು ಮತ್ತು ಸಿಬಿಐ ನಡುವಿನ ಅನಿರೀಕ್ಷಿತ ತಿಕ್ಕಾಟ ಇದೀಗ ಸ್ಪಷ್ಟ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಕೊಲ್ಕತ್ತಾ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಬಂದ ಸಿಬಿಐ ಅಧಿಕಾರಗಳನ್ನೇ ಕೊಲ್ಕತ್ತಾ ಪೊಲೀಸರು ವಶಕ್ಕೆ ಪಡೆದುಕೊಂಡ ಪ್ರಕರಣ ಮತ್ತು ಆ ಬಳಿಕ, ಕೇಂದ್ರದ ಸೇಡಿನ ರಾಜಕಾರಣ ನಡೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಮ್ಮಿಕೊಂಡಿರುವ ಸತ್ಯಾಗ್ರಹ ಇಂದಿಗೂ ಮುಂದುವರೆದಿದ್ದು, ರಾಜ್ಯದಲ್ಲಿ ಗಂಭೀರ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿದೆ.


ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, "ನಾನು ಸಾಯಲು ಸಿದ್ಧನಾಗಿದ್ದೇನೆ, ಆದರೆ ಮೋದಿ ಸರಕಾರಕ್ಕೆ ನಾನು ತಲೆಬಾಗಲು ಸಿದ್ಧವಾಗಿಲ್ಲ. ನಾವು ತುರ್ತು ಪರಿಸ್ಥಿತಿ ಜಾರಿಗೆ ಅವಕಾಶ ನೀಡುವುದಿಲ್ಲ. ದಯವಿಟ್ಟು ಭಾರತವನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ, ಸಂವಿಧಾನವನ್ನು ಉಳಿಸಿ" ಎಂದಿದ್ದಾರೆ. 



ಭಾನುವಾರ ಇದ್ದಕ್ಕಿದ್ದಂತೆ ಪೊಲೀಸ್​ ಆಯುಕ್ತರ ಮನೆ ಮೇಲೆ ಸಿಬಿಐ ಅಧಿಕಾರಿಗಳು ಮುತ್ತಿಗೆ ಹಾಕಿರುವುದರಿಂದ ಪಶ್ಚಿಮ ಬಂಗಾಳದಲ್ಲಿ ಇದೀಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ತಿಕ್ಕಾಟ ಆರಂಭವಾಗಿದೆ. ತಮ್ಮ ಸೂಚನೆ ಹೊರತಾಗಿಯೂ ಸಿಬಿಐ ಅಧಿಕಾರಿಗಳು ಕೊಲ್ಕತ್ತಾ ಪೊಲೀಸ್ ಕಮಿಷನರ್ ಅವರ ಮನೆಗೆ ಮುತ್ತಿಗೆ ಹಾಕಿದ್ದು, ಮಮತಾ ಕೆಂಗಣ್ಣಿಗೆ ಕಾರಣವಾಗಿದೆ.