ರಾಯ್‌ಬರೇಲಿ: ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಇಲ್ಲಿನ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. 


COMMERCIAL BREAK
SCROLL TO CONTINUE READING

ರಾಯ್ ಬರೇಲಿ ಜನತೆಯನ್ನು ಸಂಬೋಧಿಸಿ ಸೋನಿಯಾ ಗಾಂಧಿ ಪತ್ರ ಬರೆದಿದ್ದು, "ಮುಂದಿನ ದಿನಗಳು ಮತ್ತಷ್ಟು ಕಠಿಣವಾಗಿರಲಿವೆ ಎಂಬುದು ನನಗೆ ತಿಳಿದಿದೆ. ಆದರೆ, ನಿಮ್ಮೆಲ್ಲರ ಬೆಂಬಲ ಮತ್ತು ವಿಶ್ವಾಸದೊಂದಿಗೆ ಕಾಂಗ್ರೆಸ್ ಪ್ರತಿ ಸವಾಲನ್ನೂ ಎದುರಿಸಿ ಮುನ್ನುಗ್ಗಲಿದೆ ಎಂಬ ವಿಶ್ವಾಸ ನನಗಿದೆ" ಎಂದಿದ್ದಾರೆ.


"ಹೋರಾಟ ಎಷ್ಟೇ ದೀರ್ಘವಾಗಿದ್ದರೂ, ದೇಶದ ಮೌಲ್ಯಗಳನ್ನು ರಕ್ಷಿಸುವ ಹಾದಿಯಲ್ಲಿ ನಾನೆಂದೂ ಹಿಂದೆ ಸರಿಯುವುದಿಲ್ಲ" ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.


"ಲೋಕಸಭಾ ಚುನಾವಣೆಯಲ್ಲಿ ನನ್ನ ಮೇಲೆ ನನಗೆ ವಿಶ್ವಾಸವಿತ್ತು. ಇದರೊಂದಿಗೆ ನನ್ನ ಗೆಲುವಿಗಾಗಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಿದ್ದಾರೆ. ಹಾಗೆಯೇ ಎಸ್ಪಿ, ಬಿಎಸ್ಪಿ, ಸ್ವಾಬಿಮಾನ ದಳದ ಪ್ರತಿಯೊಬ್ಬರೂ ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ" ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ.


"ನನ್ನ ಜೀವನವು ನಿಮ್ಮ ಮುಂದೆ ತೆರೆದ ಪುಸ್ತಕದಂತಿದೆ. ನೀವೇ ನನ್ನ ಕುಟುಂಬ. ನೀವು ತುಂಬುವ ಧೈರ್ಯವೇ ನನ್ನ ನಿಜವಾದ ಶಕ್ತಿ" ಎಂದಿರುವ ಸೋನಿಯಾ, ತನ್ನ ಬೃಹತ್ ಪರಿವಾರದ ಬಗ್ಗೆ ಸದಾ ಕಾಳಜಿ ವಹಿಸುವುದಾಗಿ ಹೇಳಿದ್ದು, "ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಪ್ರಾಮಾಣಿಕವಾಗಿ ಧ್ಯನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದಿದ್ದಾರೆ.