ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ ಮೈತ್ರಿ ಘೋಷಣೆ ಮಾಡಿಕೊಂಡಿರುವ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿವೆ.


COMMERCIAL BREAK
SCROLL TO CONTINUE READING

ಇಂದು ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ  ಮುಂಬರುವ ಲೋಕಸಭಾ ಚುನಾವಣೆಗೆ ರಣಕಹಳೆ ಊದಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಯಾದವ್ ತಮ್ಮ ಎರಡು ಪಕ್ಷಗಳ ಪ್ರಧಾನಿ ಅಭ್ಯರ್ಥಿ ಮಾಯಾವತಿ ಎನ್ನುವ ವಿಷಯವನ್ನು ಪರೋಕ್ಷವಾಗಿ ಹೇಳಿದ್ದಾರೆ.


"ಉತ್ತರ ಪ್ರದೇಶ ಈ ಹಿಂದೆ ಹಲವಾರು ಪ್ರಧಾನಮಂತ್ರಿಗಳನ್ನು ನೀಡಿದೆ,ನಿಮಗೆ ಗೊತ್ತು ನಾನು ಯಾರಿಗೆ ಬೆಂಬಲ ನೀಡುತ್ತೇನೆ ಎಂದು, ಇನ್ನೊಬ್ಬರು ನಮ್ಮ ರಾಜ್ಯದಿಂದ ಪ್ರಧಾನಿಯಾದರೆ ಸಂತೋಷ " ಅಖಿಲೇಶ್ ಯಾದವ್ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ಪಿ ಪಕ್ಷದ ಮಾಯಾವತಿ " ನಮಗೆ ಎಲ್ಲ ವ್ಯತ್ಯಾಸಗಳಿಗಿಂತ ದೇಶ ದೊಡ್ಡದು.1995 ರಲ್ಲಿನ ಗೆಸ್ಟ್ ಹೌಸ್ ಹಗರಣವು ಕೂಡ ಈ ದೇಶದ ಏಳಿಗೆಗಾಗಿ ಶ್ರಮಿಸುವುದಕ್ಕೆ ಅಡ್ಡಿ ಬರುವುದಿಲ್ಲ. ಉತ್ತರ ಪ್ರದೇಶ 80 ಲೋಕಸಭಾ ಸೀಟುಗಳನ್ನು ಹೊಂದಿದೆ, ಒಂದು ವೇಳೆ ಬಿಎಸ್ಪಿ-ಎಸ್ಪಿ ಮೈತ್ರಿಕೂಟವು ಬಹುಮತದಿಂದ ಗೆಲುವನ್ನು ಸಾಧಿಸಿದ್ದೆ ಆದಲ್ಲಿ, ನಾವು ಮುಂಬರುವ ಲೋಕಸಭೆಯಲ್ಲಿ ಬಿಜೆಪಿಗೆ ತಡೆಯೊಡ್ಡಬಹುದು" ಎಂದು ಮಾಯಾವತಿ ಹೇಳಿದರು.


ಈ ಮೈತ್ರಿಕೂಟ ಕೇವಲ ಚುನಾವಣೆಯನ್ನು ಗೆಲ್ಲುವುದಷ್ಟೇ ಉದ್ದೇಶವಲ್ಲ ಬದಲಾಗಿ ಇದು ಸಾಮಾನ್ಯ ಜನರ ದಲಿತ, ಮುಸ್ಲಿಂ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಿದರು 


ಈ ಎರಡು ಪಕ್ಷಗಳ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸಿರುವುದು ನಿಜಕ್ಕೂ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಗಾಂಧಿ ಕುಟುಂಬದ ರಾಯಬರೇಲಿ ಮತ್ತು ಅಮೇಥಿ ಕ್ಷೇತ್ರಗಳಲ್ಲಿ ತಮ್ಮ ಯಾವುದೇ ಅಭ್ಯರ್ಥಿಗಳನ್ನು ಹಾಕದಿರಲು ನಿರ್ಧರಿಸಿವೆ.ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಎರಡು ಸ್ಥಾನಗಳನ್ನು ಮಾತ್ರ ಬಿಟ್ಟುಕೊಟ್ಟಿವೆ.