ನವದೆಹಲಿ: ಪಾಕ್-ಆಕ್ರಮಿತ ಕಾಶ್ಮೀರವನ್ನು ಖಾಲಿ ಮಾಡುವಂತೆ ಭಾರತ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಸಂಪೂರ್ಣ ಜಮ್ಮು -ಕಾಶ್ಮೀರ ಹಾಗೂ ಲದ್ದಾಕ್ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಪಾಕಿಸ್ತಾನಕ್ಕೆ ಸೂಚಿಸಲಾಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲ ಪಾಕಿಸ್ತಾನ ತನ್ನ ಅಕ್ರಮ ಕಬಳಿಕೆಯಿಂದ ಈ ಪ್ರದೇಶವನ್ನು ಮುಕ್ತಗೊಳಿಸಬೇಕು ಎಂದೂ ಕೂಡ ಸೂಚಿಸಲಾಗಿದೆ ಎಂದಿದೆ.


COMMERCIAL BREAK
SCROLL TO CONTINUE READING

ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಪಾಕಿಸ್ತಾನ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಇಸ್ಲಾಮಾಬಾದ್ ಕುರಿತು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಇಡೀ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಪಾಕಿಸ್ತಾನವು ಈ ಪ್ರದೇಶಗಳನ್ನು ತಮ್ಮ ಅಕ್ರಮ ಕಬಳಿಕೆಯಿಂದ ತಕ್ಷಣ ಮುಕ್ತಗೊಳಿಸಬೇಕು ಎಂದು ಪಾಕಿಸ್ತಾನಕ್ಕೆ ತಿಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.


ಪಾಕಿಸ್ತಾನದ ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಆದೇಶದಲ್ಲಿ, ಈ ಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು 2018 ರ 'ಗಿಲ್ಗಿಟ್ ಬಾಲ್ಟಿಸ್ತಾನ್ ಸರ್ಕಾರದ ಆದೇಶಕ್ಕೆ ತಿದ್ದುಪಡಿ ತರಲು ಅನುಮತಿ ನೀಡಿತ್ತು. ಈ ಕುರಿತು ಹೇಳಿಕೆ ಹೊರಡಿಸಿರುವ ವಿದೇಶಾಂಗ ಇಲಾಖೆ, " ಭಾರತ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕ ಅಧಿಕಾರಿಗೆ ಈ ಕುರಿತು ಪತ್ರ ಬರೆದು ತನ್ನ ಆಕ್ಷೇಪ ವ್ಯಕ್ತಪಡಿಸಿದ್ದು, ಗಿಲ್ಗಿಟ್-ಬಾಲ್ಟಿಸ್ತಾನ್ ಕುರಿತು ಅಲ್ಲಿನ ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶಕ್ಕೆ ತನ್ನ ವಿರೋಧ ವ್ಯಕ್ತಪಡಿಸಿದೆ" ಎಂದಿದೆ.


ಅಷ್ಟೇ ಅಲ್ಲ ತನ್ನ ಹೇಳಿಕೆಯಲ್ಲಿ ಭಾರತ ಕೇಂದ್ರಾಡಳಿತ ಪ್ರದೇಶವಾಗಿರುವ ಸಂಪೂರ್ಣ ಜಮ್ಮು-ಕಾಶ್ಮೀರ ಹಾಗೂ ಲದ್ದಾಖ್ ನಲ್ಲಿ ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್ ಕೂಡ ಶಾಮೀಲಾಗಿವೆ. ಹಾಗೂ ಇದನ್ನು ಕಾನೂನಾತ್ಮಕವಾಗಿ ಹಾಗೂ ಪರಿವರ್ತನೆಗೊಳಿಸಲಾಗದ ವಿಲೀನ ಪ್ರಕ್ರಿಯೆಯ ಅಡಿ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದೆ. ಪಾಕಿಸ್ತಾನ ಸರ್ಕಾರ ಅಥವಾ ಅದರ ನ್ಯಾಯಾಂಗ 'ಅಕ್ರಮವಾಗಿ ಮತ್ತು ಬಲವಂತವಾಗಿ ಆಕ್ರಮಿಸಿಕೊಂಡಿರುವ' ಪ್ರದೇಶಗಳಲ್ಲಿ ಮಧ್ಯಪ್ರವೇಶಿಸುವ ಹಕ್ಕನ್ನು ಹೊಂದಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.