ನವದೆಹಲಿ: ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಭಾರತೀಯ ಸಶಸ್ತ್ರ ಪಡೆ ಮುಂದುವರಿಸಲಿದೆ ಎಂದು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿರುವ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರ್ವಾನೆ, ''ಭಾರತೀಯ ಸೇನೆಯು ಸದಾ ಜಾಗರೂಕರಾಗಿರುತ್ತದೆ ಮತ್ತು ಜಾಗತಿಕ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುತ್ತದೆ. ನೆರೆಯ ದೇಶದಿಂದ ಹೊರಹೊಮ್ಮುವ ಭಯೋತ್ಪಾದನೆ ಮತ್ತು ಗಡಿಯಾಚೆಗಿನ ಒಳನುಸುಳುವಿಕೆಯ ಬಗ್ಗೆ ನಮ್ಮ ಶೂನ್ಯ ಸಹಿಷ್ಣುತೆಯ ನೀತಿಗೆ ನಾವು ಅಂಟಿಕೊಳ್ಳುತ್ತೇವೆ.'' ಭವಿಷ್ಯದ ಯಾವುದೇ ಯುದ್ಧಕ್ಕೆ ಭಾರತೀಯ ಸಶಸ್ತ್ರ ಪಡೆ ಸಿದ್ಧವಾಗಿದೆ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

72 ಸೇನಾ ದಿನಾಚರಣೆಯ ಸಂದರ್ಭದಲ್ಲಿ,  ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರ್ವಾನೆ ಅವರು ಇಂದು ದೆಹಲಿ ಕಂಟೋನ್ಮೆಂಟ್‌ನಲ್ಲಿರುವ ಪೆರೇಡ್ ಮೈದಾನದಲ್ಲಿ ಮೆರವಣಿಗೆ ವಂದಿಸಿದರು. ಸೇನಾ ಮುಖ್ಯಸ್ಥರು ಈ ಸಂದರ್ಭದಲ್ಲಿ ಸೈನಿಕರನ್ನು ಗೌರವಿಸಿದರು. 



ಈ ಸಂದರ್ಭದಲ್ಲಿ ಮಾತನಾಡಿದ ಜನರಲ್ ನರ್ವಾನೆ, ಭಯೋತ್ಪಾದನೆಯನ್ನು ಎದುರಿಸಲು ಹಲವು ಪರ್ಯಾಯ ಮಾರ್ಗಗಳಿವೆ ಮತ್ತು ಯಾವುದೇ ಸವಾಲನ್ನು ತಡೆಯಲು ಭಾರತೀಯ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಹೇಳಿದ್ದಾರೆ.


ಸೇನಾ ದಿನದಂದು ತಮ್ಮ ಮೊದಲ ಭಾಷಣದಲ್ಲಿ ಜನರಲ್ ನರ್ವಾನೆ ಸೈನಿಕರು ಸಶಸ್ತ್ರ ಪಡೆಗಳ ಶಕ್ತಿ ಎಂದು ಹೇಳಿದರು. ಭಾರತವು ಭಯೋತ್ಪಾದನೆಗೆ "ಶೂನ್ಯ ಸಹಿಷ್ಣುತೆ" ಹೊಂದಿದೆ ಎಂದು ತಿಳಿಸಿದ ಸೇನಾ ಮುಖ್ಯಸ್ಥರು, ನಮ್ಮ ದೇಶದ ಗಡಿಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಯುದ್ಧ ಪರಿಸ್ಥಿತಿಗಳು ಎದುರಾದರ ಅದನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಎಂದರು.


ಇದೇ ಸಂದರ್ಭದಲ್ಲಿ ಸಶಸ್ತ್ರ ಪಡೆ ಮತ್ತು ಅವರ ಕುಟುಂಬಗಳನ್ನು ಅಭಿನಂದಿಸಿದ ಸೇನಾ ಮುಖ್ಯಸ್ಥ ನರ್ವಾನೆ, ಸೈನಿಕರ ಶೌರ್ಯ, 'ಸರ್ವೋಚ್ಚ ತ್ಯಾಗ' ಮತ್ತು ನಿಸ್ವಾರ್ಥ ದೇಶ ಭಕ್ತಿಗಾಗಿ ನಮಸ್ಕರಿಸಿದರು. "ತಾಂತ್ರಿಕ ಸೇರ್ಪಡೆ" ಮತ್ತು "ದೇಶೀಕರಣ" ಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಾವು ನಮ್ಮ ದೇಶದ ಮೂಲ ಮೌಲ್ಯಗಳು ಮತ್ತು ನೀತಿ, ನಮ್ಮ ನಂಬಿಕೆಗಳನ್ನು ಎತ್ತಿಹಿಡಿಯಲು ನಮ್ಮ ಕೈಲಾದ ಎಲ್ಲಾ ಪ್ರಯತ್ನವನ್ನು ಮುಂದುವರಿಸುತ್ತೇವೆ" ಎಂದರು.


ಭಯೋತ್ಪಾದನೆಯನ್ನು ಉತ್ತೇಜಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ನಮಗೆ ಹಲವು ಆಯ್ಕೆಗಳಿವೆ ಎಂದು ತಿಳಿಸಿದ ನರ್ವಾನೆ, ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯ ಮೇಲೆ ನಮ್ಮ ಕಣ್ಣುಗಳು ಇರುತ್ತವೆ. ನಮ್ಮಲ್ಲಿ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಇದೆ, ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ನಾವು ಹಿಂಜರಿಯುವುದಿಲ್ಲ. 'ಭಾರತೀಯ ಸೈನ್ಯದ ಅತ್ಯುತ್ತಮ ಶಕ್ತಿ ಸೈನಿಕ' ಎಂದು ಹೆಮ್ಮೆಯಿಂದ ನುಡಿದರು.


'ಸರ್ಕಾರವು ನಿಮ್ಮ ಯುದ್ಧದ ಅಗತ್ಯಗಳನ್ನು ಪೂರೈಸುತ್ತದೆ ಎಂದು ನೀವು ಖಚಿತವಾಗಿ ಹೇಳಬಹುದು ಎಂದು ಸೈನಿಕರಿಗೆ ಭರವಸೆ ನೀಡಿದ ಜನರಲ್ ನರ್ವಾನೆ, ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್‌ನ ತ್ವರಿತತೆಯಿಂದಾಗಿ ಈಶಾನ್ಯದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದೆ. ಪ್ರತ್ಯೇಕತಾವಾದಿಯನ್ನು ಅಲ್ಲಿ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವುದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.


ಇಂದಿನ ಸೇನಾ ದಿನಾಚರಣೆ ಇನ್ನೊಂದು ಕಾರಣಕ್ಕೆ ವಿಶೇಷವಾಗಿತ್ತು. ಏಕೆಂದರೆ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಪೆರೇಡ್ ನಲ್ಲಿ ಸೇರ್ಪಡೆಗೊಂಡರು. ಅವರು ಸೇನಾ ದಿನದ ಪೆರೇಡ್ ನಲ್ಲಿ ಎಲ್ಲ ಪುರುಷ ತುಕಡಿಗಳನ್ನು ಮುನ್ನಡೆಸಿದರು. ಕ್ಯಾಪ್ಟನ್ ತಾನ್ಯಾ ಶೆರ್ಗಿಲ್ ಈ ಗೌರವವನ್ನು ಪಡೆದ ಮೊದಲ ಮಹಿಳಾ ಅಧಿಕಾರಿ ಎನಿಸಿಕೊಂಡರು.


ತಾನ್ಯಾ ಶೆರ್ಗಿಲ್ ಅವರನ್ನು ಆರ್ಮಿ ಸಿಗ್ನಲ್ಸ್ ಕಾರ್ಪ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಮಾರ್ಚ್ 2017 ರಲ್ಲಿ ಅವರು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಆಯೋಗವನ್ನು ಪಡೆದರು. ತಾನ್ಯಾ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ಬಿ.ಟೆಕ್ ಮಾಡಿದ್ದಾರೆ. ಅವರ ತಂದೆ ಸೇನೆಯ 101 ಮಧ್ಯಮ ರೆಜಿಮೆಂಟ್‌ನಲ್ಲಿದ್ದರೆ, ತಾನ್ಯಾ ಅವರ ಅಜ್ಜ ಸಶಸ್ತ್ರ ರೆಜಿಮೆಂಟ್‌ನಲ್ಲಿದ್ದರು ಮತ್ತು ಮುತ್ತಜ್ಜ ಸಿಖ್ ರೆಜಿಮೆಂಟ್‌ನಲ್ಲಿದ್ದರು.


ಕಳೆದ ವರ್ಷ ನಡೆದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿ ಲೆಫ್ಟಿನೆಂಟ್ ಭವ್ನಾ ಕಸ್ತೂರಿ ಅವರು ಆರ್ಮಿ ಸರ್ವಿಸ್ ಕಾರ್ಪ್ಸ್ ತಂಡವನ್ನು ಮುನ್ನಡೆಸಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು.