ಎಟಿಎಂ ಸೆಂಟರ್`ನಲ್ಲಿ ಚಿರತೆ ಮರಿ!

ಚಿರತೆ ಮರಿಯೊಂದು ಚಳಿ ತಡೆಯಲಾರದೆ ಬೆಚ್ಚಗಿನ ಪ್ರದೇಶ ಅರಸುತ್ತಾ ಇಲ್ಲಿನ ಪಂಜಾಬ್ ನ್ಯಾಶನಲ್ ಬ್ಯಾಂಕ್ ಎಟಿಎಂ ಒಳಗಿನ ಮೂಲೆಯಲ್ಲಿ ಆಶ್ರಯ ಪಡೆದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಮಂಡಿ: ಅತಿಯಾದ ಚಳಿಯಿಂದ ರಕ್ಷಣೆ ಪಡೆಯಲು ಚಿರತೆ ಮರಿಯೊಂದು ಎಟಿಎಂ ಸೆಂಟರ್ ಒಳಗೆ ಕುಳಿತ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಥಂಗ್ ಪ್ರದೇಶದಲ್ಲಿ ನಡೆದಿದೆ.
ಇತ್ತೀಚೆಗೆ ಸುರಿದ ಹಿಮಪಾತದಿಂದಾಗಿ ಕಾಡು ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಚಿರತೆ ಮರಿಯೊಂದು ಚಳಿ ತಡೆಯಲಾರದೆ ಬೆಚ್ಚಗಿನ ಪ್ರದೇಶ ಅರಸುತ್ತಾ ಇಲ್ಲಿನ ಪಂಜಾಬ್ ನ್ಯಾಶನಲ್ ಬ್ಯಾಂಕ್ ಎಟಿಎಂ ಒಳಗಿನ ಮೂಲೆಯಲ್ಲಿ ಆಶ್ರಯ ಪಡೆದಿದೆ.
ಎಟಿಎಂ ಒಳಗೆ ಹಣ ಡ್ರಾ ಮಾಡಲು ಬಂದ ಗ್ರಾಹಕರೊಬ್ಬರು ಚಿರತೆ ಮರಿ ಕಂಡಿ ಹೌಹಾರಿದ್ದಾರೆ. ಕೂಡಲೇ ಅದನ್ನು ಹೊರಗೆ ಕಳುಹಿಸಲು ಪ್ರಯತ್ನಿಸಿದ್ದಾರೆ. ಜನರ ಕಿರುಚಾಟಕ್ಕೆ ಭಯಗೊಂಡ ಚಿರತೆ ಮರಿ ತೀವ್ರ ಅಸ್ವಸ್ಥಗೊಂಡಿತ್ತು ಎನ್ನಲಾಗಿದೆ. ಬಳಿಕ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮರಿಯನ್ನು ರಕ್ಷಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.