ನವದೆಹಲಿ: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಪೌರತ್ವ (ತಿದ್ದುಪಡಿ) ಮಸೂದೆ-2019ಕ್ಕೆ ಇಂದು ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ.  ಮಧ್ಯಾಹ್ನ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಮಸೂದೆ ದೇಶದ ಅಲ್ಪಸಂಖ್ಯಾತ ವಿರೋಧ ಮಸೂದೆ ಅಲ್ಲ. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಧರ್ಮಗಳ ಆಧಾರದ ಮೇಲೆ ದೇಶ ವಿಭಜಿಸದೆ ಇದ್ದಿದ್ದರೆ ಈ ಮಸೂದೆಯ ಅವಶ್ಯಕತೆಯೇ ಇರಲಿಲ್ಲ ಎಂದು ಹೇಳಿದ್ದಾರೆ. ಪ್ರಸ್ತಾವಿತ ಕಾನೂನು ಸಂವಿಧಾನದ ಯಾವುದೇ ಅನುಚ್ಛೇದವನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದ ಗೃಹ ಸಚಿವರು, "ಸಮಂಜಸವಾದ ವರ್ಗೀಕರಣ"ವನ್ನು ಮಾಡಿ, ಇದು ಭಾರತದ ಅಲ್ಪಸಂಖ್ಯಾತರ ವಿರುದ್ಧ "ಶೇಕಡಾ 0.001 ಸಹ ಇಲ್ಲ" ಎಂದು ಒತ್ತಿ ಹೇಳಿದ್ದಾರೆ. ಈ ವೇಳೆ ಸದನದಲ್ಲಿ ತೀವ್ರ ಕೋಲಾಹಲವೇ ಸೃಷ್ಟಿಯಾಗಿದ್ದು, ಮಸೂದೆ ಪರವಾಗಿ 293 ಮತಗಳು ಬಿದ್ದರೆ, ಮಸೂದೆಗೆ ವಿರುದ್ಧವಾಗಿ 82 ಮತಗಳು ಬಿದ್ದಿವೆ.

COMMERCIAL BREAK
SCROLL TO CONTINUE READING

ಈ ವೇಳೆ ಮಾತನಾಡಿರುವ ಗೃಹ ಸಚಿವರು "ಸಮಂಜಸವಾದ ವರ್ಗೀಕರಣವನ್ನು ಮಾಡಲಾಗಿದ್ದು, ಸಮಾನತೆಯ ಬಗ್ಗೆ ಮಾತನಾಡುವ ಎಲ್ಲರ ಜೊತೆ ತಾವು ಮಸೂದೆ ಕುರಿತು ಚರ್ಚೆ ನಡೆಸಲು ಸಿದ್ಧ. ಈ ರೀತಿ ಒಂದು ವೇಳೆ ನಾವು ಸಮಾನತೆಯನ್ನು ವ್ಯಾಖ್ಯಾನಿಸಿದರೆ 'ಅಲ್ಪಸಂಖ್ಯಾತ' ಎಂದು ಹೇಳಲಾಗುವವರಿಗೆ ಇದು ಯಾಕೆ ಅನ್ವಯಿಸುವುದಿಲ್ಲ? ಶಿಕ್ಷಣದಂತಹ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಹೇಗೆ ವಿಶೇಷ ಕೋಟಾ ಹಾಗು ಸ್ಥಾನಮಾನ ಸಿಗುತ್ತದೆ ಎಂಬುದನ್ನು ದಯವಿಟ್ಟು ನನಗೆ ವಿವರಿಸಿ" ಎಂದು ಶಾ ಹೇಳಿದ್ದಾರೆ.

ಮಸೂದೆ ಮಂಡನೆಯಾಗುವ ವೇಳೆ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರತಿಪಕ್ಷಗಳ ನಡುವೆ ನಡೆದ ತೀವ್ರ ಮಾತಿನ ಚಕಮಕಿಗೆ ಲೋಕಸಭೆ ಸಾಕ್ಷಿಯಾಗಿದೆ. ಮಸೂದೆಯನ್ನು 'ದೇಶದ ಅಲ್ಪಸಂಖ್ಯಾತರ ಮೇಲಿನ ಶಾಸನವಲ್ಲದೆ ಬೇರೇನಲ್ಲ' ಎಂದು ಕರೆದ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, " ಇದು ಸಂವಿಧಾನದ ಮುನ್ನುಡಿಗೆ ವಿರುದ್ಧವಾಗಿದ್ದು, ಸಂವಿಧಾನದ ಮೂಲಭೂತ ಸಿದ್ಧಾಂತಗಳನ್ನು ಉಲ್ಲಂಘಿಸುತ್ತದೆ" ಎಂದು ಆರೋಪಿಸಿದ್ದಾರೆ
.
ಪೌರತ್ವ (ತಿದ್ದುಪಡಿ) ಮಸೂದೆ 2019 ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡುವ ಒಂದು ಪ್ರಯತ್ನವಾಗಿದೆ . ಈ ಮಸೂದೆ ಒಂದು ವೇಳೆ ಅಸ್ಥ್ತಿತ್ವಕ್ಕೆ ಬಂದರೆ,ಮಸೂದೆಯಲ್ಲಿ  2014 ರ ಡಿಸೆಂಬರ್ 31 ರವರೆಗೆ ಮೇಲೆ ಹೇಳಿರುವ ಮೂರು ದೇಶಗಳಿಂದ ಭಾರತಕ್ಕೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳ ನಿರಾಶ್ರಿತ ಸದಸ್ಯರಿಗೆ ಭಾರತೀಯ ಪೌರತ್ವವನ್ನು ನೀಡುವ ಕುರಿತು ಪ್ರಸ್ತಾಪವಿದೆ.