ಕೋಲ್ಕತ್ತಾ: 2013ರ ಜುಲೈ 21ರಂದು ಎರಡೂವರೆ ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


COMMERCIAL BREAK
SCROLL TO CONTINUE READING

ದಕ್ಷಿಣ ಕೊಲ್ಕತ್ತಾದ ಖಿದ್ದರ್ಪುರ್ ನಲ್ಲಿ ಫುಟ್ ಪಾತ್ ಮೇಲೆ ಪೋಷಕರೊಂದಿಗೆ ಮಲಗಿದ್ದ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಅಪಹರಿಸಲಾಗಿತ್ತು. ಈ ಸಂಬಂಧ ಮಗುವಿನ ಅಜ್ಜಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಜುಲೈ 22ರಂದು ವಿಕ್ಟೋರಿಯಾ ಸ್ಮಾರಕದ ಬಳಿ ಚರಂಡಿಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಬಳಿಕ  ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದು ಪೋಲಿಸ್ ತನಿಖೆಯಿಂದ ಬಹಿರಂಗವಾಗಿತ್ತು. ಈ ಪ್ರಕರಣದ ಆರೋಪಿ ಸುರೇಶ ಪಾಶ್ವಾನ್(41) ವಿರುದ್ಧ ಐಪಿಸಿ ಸೆಕ್ಷನ್ 364, 376, 302 ಮತ್ತು ಮಕ್ಕಳ ರಕ್ಷಣಾ ಕಾಯ್ದೆ 2012ರ ಅನ್ವಯ 2013ರ ಜುಲೈನಲ್ಲಿ ಪ್ರಕರಣ ದಾಖಲಾಗಿತ್ತು. 


ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನಗರ ಸೆಷನ್ಸ್ ನ್ಯಾಯಾಲಯ ಸುರೇಶ ಪಾಶ್ವಾನ್ ನನ್ನು ಅಪರಾಧಿ ಎಂದು ಘೋಷಿಸಿ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.