ನವದೆಹಲಿ: ಶೌಚಾಲಯದ ಬಾಗಿಲು ಎಂದು ತಿಳಿದು ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯಲು ಮುಂದಾದ ವಿಚಿತ್ರ ಘಟನೆ ಇತ್ತೀಚೆಗೆ ನಡೆದಿದೆ. 


COMMERCIAL BREAK
SCROLL TO CONTINUE READING

ನವದೆಹಲಿಯಿಂದ ಪಾಟ್ನಾ ಮಾರ್ಗವಾಗಿ ಚಲಿಸುತ್ತಿದ್ದ 150 ಪ್ರಯಾಣಿಕರಿದ್ದ ಗೋಏರ್'ನ G8-149 ವಿಮಾನದಲ್ಲಿ ಈ ಘಟನೆ ನಡೆದಿದೆ. ಮಾರ್ಗ ಮಧ್ಯೆ ಎದ್ದ ಯುವಕನೊಬ್ಬ ಶೌಚಾಲಯದ ಬಾಗಿಲು ಎಂದು ಭಾವಿಸಿ ವಿಮಾನದ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆರೆಯಲು ಹೋಗಿದ್ದಾನೆ. ಆದರೆ ಅಲ್ಲಿದ್ದವರು ಕೂಡಲೇ ಆತನನ್ನು ತಡೆದಿದ್ದಾರೆ ಎನ್ನಲಾಗಿದೆ. ಆತನನ್ನು ಪಾಟ್ನಾ ಏರ್‌ಪೋರ್ಟ್‌ ಪೊಲೀಸ್‌ ಠಾಣೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ( ಸಿಐಎಸ್‌ಎಫ್‌ ) ಸಿಬ್ಬಂದಿ ರವಾನಿಸಿದ್ದಾರೆ. ಈತ ರಾಜಸ್ತಾನದ ಖಾಸಗಿ ಬ್ಯಾಂಕ್ ಉದ್ಯೋಗಿ ಎಂದು ತಿಳಿದುಬಂದಿದೆ. 


ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆತ ಮೊದಲನೇ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವುದಾಗಿಯೂ, ಅದು ತುರ್ತು ನಿರ್ಗಮನದ ಬಾಗಿಲು ಎಂದು ತಿಳಿಯದೆ ತೆರೆಯಲು ಹೋಗಿದ್ದಾಗಿ ತಿಳಿಸಿದ್ದಾನೆ ಎಂದು ಏರ್‌ಪೋರ್ಟ್ ಪೊಲೀಸ್‌ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಹೇಳಿದ್ದಾರೆ.