ವಾರಾಂತ್ಯದಲ್ಲಿ, ಹಲವಾರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಶಾಕ್ ನೀಡಿದ್ದಾರೆ. ಇದಲ್ಲದೆ ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದ್ದು, ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷದಿಂದ ಇನ್ನೂ ಹಲವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಲು ಕಾಯುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇನ್ನು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಪೊಲೀಸ್ ಅಧಿಕಾರಿಗಳು ತಮ್ಮ ಮಾತುಗಳನ್ನು ಕೇಳುತ್ತಿಲ್ಲ ಎಂಬ ಇತ್ತೀಚಿನ ಹೇಳಿಕೆಯ ವಿರುದ್ಧ  ವಾಗ್ಧಾಳಿ ನಡೆಸಿರುವ ದಿಲೀಪ್ ಘೋಷ್, “ನೀವು ಪೊಲೀಸ್ ಅಧಿಕಾರಿಗಳನ್ನು ಕಳ್ಳರನ್ನಾಗಿ ಮಾಡಿದ್ದೀರಿ ಮತ್ತು ಹಣವನ್ನು ಸುಲಿಗೆ ಮಾಡಲು ಬಳಸಿದ್ದೀರಿ. ಜನರು ಪೊಲೀಸರನ್ನು ನೋಡಿದೊಡನೆ ಅವರ ಬೆನ್ನಟ್ಟುವ ಪರಿಸ್ಥಿತಿ ತಲೆದೋರಿದೆ" ಎಂದಿದ್ದಾರೆ.


ಇಂದು ಪಶ್ಚಿಮ ಬಂಗಾಳದ ಪೊಲೀಸ್ ಇಲಾಖೆಯ ಇಂತಹ ಪರಿಸ್ಥಿತಿಗೆ ಮಮತಾ ಬ್ಯಾನರ್ಜಿ ನೇರ ಹೊಣೆ ಎಂದು ಘೋಷ್ ಆರೋಪಿಸಿದ್ದಾರೆ.


ತೃಣಮೂಲ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳದಂತೆ ತಡೆಯಲು ಶಾಸಕರ ನಿವಾಸಗಳ ಹೊರಗೆ ಪೊಲೀಸರನ್ನು ಕಾವಲಿಗೆ ಇರಿಸಲಾಗಿದೆ. "ಇನ್ನೂ ಅನೇಕ ಕೌನ್ಸಿಲರ್‌ಗಳು ಮತ್ತು ಶಾಸಕರು ಟಿಎಂಸಿಯನ್ನು ತೊರೆದು ಬಿಜೆಪಿಗೆ ಸೇರಲು ಬಯಸುತ್ತಿದ್ದಾರೆ" ಎಂದು ಅವರು ಹೇಳಿದರು.


2021 ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ಗೆ ಸಹಾಯ ಮಾಡುವ ಬಿಜೆಪಿಯ ಮಿತ್ರ ಜನತಾದಳ ಯುನೈಟೆಡ್ (ಜೆಡಿಯು) ಸದಸ್ಯರಾಗಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಬಗ್ಗೆಯೂ ಬಿಜೆಪಿ ನಾಯಕ ಹರಿಹೈದಿದ್ದಾರೆ.


“ಪ್ರಶಾಂತ್ ಕಿಶೋರ್ ಎಂಬ ವ್ಯಕ್ತಿ ತೃಣಮೂಲ ಕಾಂಗ್ರೆಸ್ ಗೆಲುವು ಸಾಧಿಸಲು ಒಪ್ಪಂದ ಮಾಡಿಕೊಂಡಿದ್ದಾನೆ. ಆದರೆ ಮಮತಾ ಸರ್ಕಾರ ಈಗ ಮುಕ್ತಾಯಗೊಂಡ ಸರ್ಕಾರವಾಗಿದೆ,”ಎಂದು ಘೋಷ್ ಹೇಳಿದರು.


ಶನಿವಾರ, ಟಿಎಂಸಿಯ ಹಲವು ಕಾರ್ಯಕರ್ತರು ಪಶ್ಚಿಮ ಬಂಗಾಳದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಭಾನುವಾರವೂ ಸಹ ಹಲವು ಟಿಎಂಸಿ ಮುಖಂಡರು ಮಮತಾ ಅವರ ಪಕ್ಷವನ್ನು ತೊರೆದು ದಿಲೀಪ್ ಘೋಷ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು.