ನವದೆಹಲಿ: ಲೋಕಸಭಾ ಚುನಾವಣೆಗೆ 5ನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಒಟ್ಟು 7 ರಾಜ್ಯಗಳ 51 ಕ್ಷೇತ್ರದಲ್ಲಿ ಮತದಾರರು ಹಕ್ಕು ಚಲಾಯಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಉತ್ತರಪ್ರದೇಶದಲ್ಲಿ 14 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯದ ಲಖನೌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಗೃಹ ಸಚಿವ ರಾಜನಾಥ್​ ಸಿಂಗ್ ಇಂದು ಬೆಳಗ್ಗೆಯೇ ಸ್ಕಾಲರ್ಸ್​ ಹೋಮ್ ಹೈಸ್ಕೂಲ್​​ನ ಮತಗಟ್ಟೆ ಸಂಖ್ಯೆ 333ಕ್ಕೆ ತೆರಳಿ ಮತ ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದನೇ ಹಂತದ ಮತದಾನದಲ್ಲಿ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡಿದರು. ರಾಹುಲ್ ಗಾಂಧಿ ಸವಾಲಿಗೆ ಪ್ರತಿಕ್ರಿಯಿಸಿದ ಅವರು, "ನಾನು ಯಾವುದೇ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ" ಎಂದರಲ್ಲದೆ, ನರೇಂದ್ರ ಮೋದಿಜಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದರು.



ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಲಖನೌದ ಸಿಟಿ ಮಾಂಟೆಸ್ಸರಿ ಇಂಟರ್​ ಸ್ಕೂಲ್​ನ ಮತಗಟ್ಟೆಯಲ್ಲಿ ಮತದಾನ ಮಾಡಿದರು. 



ಐದನೇ ಹಂತದ ಮತದಾನದಲ್ಲಿ ಉತ್ತರ ಪ್ರದೇಶದ 14, ರಾಜಸ್ಥಾನದ 12, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶದಲ್ಲಿ ತಲಾ 7 ಕ್ಷೇತ್ರಗಳು, ಬಿಹಾರ 5, ಜಾರ್ಖಂಡ್​​ 4 ಹಾಗೂ ಜಮ್ಮು ಕಾಶ್ಮೀರದ 2 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​, ಸ್ಮೃತಿ ಇರಾನಿ, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ಸೋನಿಯಾ ಗಾಂಧಿ ಸೇರಿದಂತೆ ಒಟ್ಟು 674 ಅಭ್ಯರ್ಥಿಗಳು ಕಣದಲ್ಲಿದ್ದಾರೆ.