ಚೆನ್ನೈ: ತಮ್ಮ ರಾಜಕೀಯ ಪ್ರವೇಶಕ್ಕೆ ಎಐಎಡಿಎಂಕೆ ಸರ್ಕಾರದ ಕಳಪೆ ಆಡಳಿತವೇ ಕಾರಣ  ಎಂದು ಹಾಸನ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

"ನಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ. ಏಕೆಂದರೆ ರಾಜ್ಯದಲ್ಲಿ ಎಐಎಡಿಎಂಕೆ ಪಕ್ಷದ ಆಡಳಿತ ಕಳಪೆಯಾಗಿದೆ. ಅದಕ್ಕಾಗಿಯೇ ನಾನು ಅವರ್ಯಾರನ್ನೂ ಭೇಟಿಯಾಗುತ್ತಿಲ್ಲ" ಎಂದು ಕಮಲ್ ಹಾಸನ್ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 


ಅಲ್ಲದೆ, ತಮ್ಮ ರಾಜಕೀಯ ಪಕ್ಷವನ್ನು ಘೋಷಿಸುವ ಮುನ್ನಾ ದಿನವಾದ ಇಂದು ತಮಿಳು ಚಿತ್ರನಟ ಕಮಲ್ ಹಾಸನ್, ನಾಮ್ ತಮಿಳರ್ ಕಟ್ಚಿ ಮುಖ್ಯ ಸಂಯೋಜಕ ಸೀಮನ್ ಅವರೊಂದಿಗೆ ಸಭೆ ನಡೆಸಿದ್ದಾರೆ. 


ಚೆನ್ನೈನಲ್ಲಿರುವ ಕಮಲ್ ಹಾಸನ್ ಮನೆಯಲ್ಲಿ ಈ ಸಭೆ ನಡೆದಿದೆ. ಫೆಬ್ರವರಿ 21 ರಂದು ಅವರ ರಾಜಕೀಯ ಇನಿಂಗ್ಸ್ ಆರಂಭಿಸಲಿರುವ ಕಮಲ್ ಹಾಸನ್, ಹಲವಾರು ರಾಜಕೀಯ ನಾಯಕರನ್ನು ಭೇಟಿಯಾಗಿದ್ದು, ನೂತನ ಪಕ್ಷದ ಉದ್ಘಾಟನಾ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದೆ. 


ತಮಿಳುನಾಡಿನ ದ್ರಾವಿಡ ಪಕ್ಷಗಳ ಉಪಸ್ಥಿತಿ ಬಗ್ಗೆ ಮತ್ತು ಅದೇ ಸಿದ್ಧಾಂತದೊಂದಿಗೆ ಹೇಗೆ ಯಶಸ್ವಿಯಾಗಬಹುದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹಾಸನ್, ದ್ರಾವಿಡ ಸಿದ್ಧಾಂತಗಳು ರಾಜಕೀಯದಲ್ಲಿ ಯಶಸ್ವಿಯಾಗುತ್ತವೆ ಎಂದರು.


ಆಮ್ ಆದ್ಮಿ ಪಕ್ಷದ(ಎಎಪಿ) ಮುಖಂಡ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ನೂತನ ಪಕ್ಷದ ಚಾಲನೆ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.