ಮಹಾರಾಷ್ಟ್ರ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಜಿತ್ ಪವಾರ್ ಹೇಳಿದ್ದೇನು?
ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಮುಖಂಡ ಅಜಿತ್ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರದಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆದ ಹೈಡ್ರಾಮಾದ ನಂತರ, ಶನಿವಾರ ಭಾರತೀಯ ಜನತಾ ಪಕ್ಷದ (BJP) ನಾಯಕ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಮುಖಂಡ ಅಜಿತ್ ಪವಾರ್ (Ajit Pawar) ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಫಲಿತಾಂಶದ ದಿನದಿಂದ ಇಲ್ಲಿಯವರೆಗೆ ಯಾವುದೇ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ರೈತರ ಸಮಸ್ಯೆಗಳು ಸೇರಿದಂತೆ ಮಹಾರಾಷ್ಟ್ರವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ, ಆದ್ದರಿಂದ ನಾವು ಬಿಜೆಪಿಯೊಂದಿಗೆ ಸ್ಥಿರ ಸರ್ಕಾರವನ್ನು ರಚಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಮಹಾರಾಷ್ಟ್ರದ ರಾಜಕೀಯದಲ್ಲಿ ಹಠಾತ್ ಬೆಳವಣಿಗೆಯಲ್ಲಿ ಅಜಿತ್ ಪವಾರ್ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಒಪ್ಪಿಗೆಯನ್ನು ಪಡೆದು ಬಿಜೆಪಿಗೆ ಬೆಂಬಲ ನೀಡಿದ್ದಾರೋ ಅಥವಾ ಇದು ಅವರ ವೈಯಕ್ತಿಕ ನಿರ್ಧಾರವೋ ಎಂಬ ಊಹಾಪೋಹಗಳು ಮನೆ ಮಾಡಿತ್ತು. ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ದೇವೇಂದ್ರ ಫಡ್ನವೀಸ್ ಅವರ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರ ರಚನೆ ವಿಷಯಕ್ಕೆ ಸಂಬಂಧಿಸಿದ ಚರ್ಚೆ ನಡೆಯಿತು. ಅಜಿತ್ ಪವಾರ್ ಅವರು ಎನ್ಸಿಪಿಯ ಸಂಸದೀಯ ಮಂಡಳಿಯ ನಾಯಕರಾಗಿದ್ದು, ಶರದ್ ಪವಾರ್ ಅವರ ಒಪ್ಪಿಗೆಯಿಲ್ಲದೆ ಎನ್ಸಿಪಿಯ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಎನ್ನಲಾಗಿದೆ.
ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್, "ಜನರು ನಮಗೆ ಸ್ಪಷ್ಟ ಜನಾದೇಶವನ್ನು ನೀಡಿದರು, ಆದರೆ ಫಲಿತಾಂಶದ ನಂತರ, ಶಿವಸೇನೆ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿತು, ಇದರ ಪರಿಣಾಮವಾಗಿ ರಾಷ್ಟ್ರಪತಿಗಳ ಆಡಳಿತ ಹೇರಲಾಯಿತು. ಮಹಾರಾಷ್ಟ್ರಕ್ಕೆ ಸ್ಥಿರವಾದ ಸರ್ಕಾರ ಬೇಕು, 'ಖಿಚ್ಡಿ' ಸರ್ಕಾರವಲ್ಲ" ಎಂದರು.