ಆರೋಗ್ಯ ಸಚಿವರ ಬದಲು ಹಣಕಾಸು ಸಚಿವರು ಇ-ಸಿಗರೇಟ್ ನಿಷೇಧ ಘೋಷಿಸಿದ್ದೇಕೆ..? ಕಿರಣ್ ಮಜುಂದಾರ್ ಪ್ರಶ್ನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರ ಇ-ಸಿಗರೇಟ್ ನಿಷೇಧದ ಘೋಷಣೆ ವಿಚಾರವಾಗಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ ಈಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವರು ಘೋಷಣೆ ಹೊರಡಿಸಬೇಕಾಗಿರುವುದಕ್ಕೆ ಹಣಕಾಸು ಸಚಿವರು ಬಂದಿರುವುದೇತಕ್ಕೆ ಎಂದು ಅವರು ಪ್ರಶ್ನಿಸಿದ್ದಾರೆ.
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರ ಇ-ಸಿಗರೇಟ್ ನಿಷೇಧದ ಘೋಷಣೆ ವಿಚಾರವಾಗಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ ಈಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವರು ಘೋಷಣೆ ಹೊರಡಿಸಬೇಕಾಗಿರುವುದಕ್ಕೆ ಹಣಕಾಸು ಸಚಿವರು ಬಂದಿರುವುದೇತಕ್ಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಿರಣ್ ಮಜುಂದಾರ ' ಇ- ಸಿಗರೇಟ್ ನಿಷೇಧ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಿದ್ದಾರೆ. ಆದರೆ ಈ ಘೋಷಣೆ ಆರೋಗ್ಯ ಸಚಿವಾಲಯದಿಂದ ಏಕೆ ಬರಲಿಲ್ಲ ? ಅದೇ ರೀತಿಯಾಗಿ ಗುಟ್ಕಾವನ್ನು ಹೇಗೆ ನಿಷೇಧಿಸುತ್ತಿರಿ? ಮತ್ತು ಆರ್ಥಿಕ ಉತ್ತೇಜನಕ್ಕೆ ಸಂಬಂಧಿಸಿದ ಕ್ರಮಗಳೇನು? ಎಂದು ಅವರು ಪ್ರಶ್ನಿಸಿದ್ದಾರೆ.
ಇದಕ್ಕೆ ಈಗ ಪ್ರತಿಕ್ರಿಯೆ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ಕಿರಣ್ ಜಿ, ಕೆಲವು ವಿಷಯಗಳು.ಈ ಪತ್ರಿಕಾಗೋಷ್ಠಿಯು ಕ್ಯಾಬಿನೆಟ್ ನಿರ್ಧಾರಗಳಿಗೆ ಮೀಸಲಾಗಿತ್ತು. ಈ ಹಿನ್ನಲೆಯಲ್ಲಿ ಈ ಸಭೆ ನೇತೃತ್ವವನ್ನು ವಹಿಸಿದಾಗ ನಾನು ಸರ್ಕಾರದ ಸಚಿವ ಸಂಪುಟದ ಪ್ರತಿನಿಧಿಯಾಗಿದ್ದೇನೆ ಎಂದು ಹೇಳುವ ಮೂಲಕ ಇದನ್ನು ಪ್ರಾರಂಭಿಸಿದೆ. ಡಾ.ಹರ್ಷವರ್ದನ್ ಅವರು ಅಂತರಾಷ್ಟ್ರೀಯ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶದಲ್ಲಿದ್ದಾರೆ' ಎಂದರು.
ಇನ್ನು ಆರ್ಥಿಕ ಉತ್ತೇಜನಕ್ಕೆ ಸಂಬಂಧಿಸಿದ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಲಾ ಸೀತಾರಾಮನ್ ' ಹಣಕಾಸು ಸಚಿವೆಯಾಗಿ ನೀವು ನನ್ನನ್ನು ಗಮನಿಸಿರಬಹುದು. ನಾನು ಆರ್ಥಿಕತೆಯ ವಿಷಯಗಳಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ನಿಯಮಿತವಾಗಿ ಮಾತನಾಡುತ್ತಿದ್ದೇನೆ' ಎಂದು ಅವರು ತಿಳಿಸಿದ್ದಾರೆ. ಸಚಿವರ ಉತ್ತರಕ್ಕೆ ಸಂತುಷ್ಟರಾಗಿರುವ ಕಿರಣ್ ಮಜುಂದಾರ ಶಾ 'ನಾನು ಈಗ ಅರ್ಥಮಾಡಿಕೊಂಡಿದ್ದೇನೆ ಮತ್ತು ಸರಿಪಡಿಸಿಕೊಂಡಿದ್ದೇನೆ. ನನ್ನ ಗೊಂದಲವನ್ನು ನಿವಾರಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಗೆ ನಿಜವಾಗಿಯೂ ಕೃತಜ್ಞರಾಗಿರಬೇಕು ಎಂದು ಹೇಳಿದ್ದಾರೆ.