ನವದೆಹಲಿ: ಕೇಂದ್ರ ಸರ್ಕಾರವು ದೇಶದ 12 ರಾಜ್ಯಗಳಲ್ಲಿ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ(One Nation-One Ration Card) ಯೋಜನೆಯನ್ನು ಪ್ರಾರಂಭಿಸಿದೆ. ಜೂನ್ ವೇಳೆಗೆ ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಾಗುವುದು. ಈ ಯೋಜನೆಯಡಿ ರೇಷನ್ ಕಾರ್ಡ್‌ಗಳು ದೇಶಾದ್ಯಂತ ಮಾನ್ಯವಾಗಿರುತ್ತವೆ. ಈ ಯೋಜನೆಯಡಿ, ಪಡಿತರ ಚೀಟಿ ಹೊಂದಿರುವವರು ದೇಶದ ಯಾವುದೇ ಸರ್ಕಾರಿ ಪಡಿತರ ಅಂಗಡಿಯಿಂದ ತಮ್ಮ ಪಡಿತರವನ್ನು ತೆಗೆದುಕೊಳ್ಳಬಹುದು. ಈ ಯೋಜನೆಯು ಭ್ರಷ್ಟಾಚಾರವನ್ನು ನಿಗ್ರಹಿಸುವುದಲ್ಲದೆ, ಬಡವರಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡಾಗ ಸಬ್ಸಿಡಿ ರೇಷನ್ ನಿರಾಕರಿಸಲಾಗುವುದಿಲ್ಲ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಈ ವರ್ಷದ ಜೂನ್‌ನಲ್ಲಿ 'ಒನ್ ನೇಷನ್, ಒನ್ ರೇಷನ್ ಕಾರ್ಡ್' ಅನ್ನು ರಾಷ್ಟ್ರವ್ಯಾಪಿ ಜಾರಿಗೆ ತರಲಾಗುವುದು ಎಂದು ಹೇಳಿದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಫಲಾನುಭವಿಗಳು ಈ ಯೋಜನೆಯ ಲಾಭವನ್ನು ಜನವರಿ 1 ರಿಂದ ದೇಶದ 12 ರಾಜ್ಯಗಳಲ್ಲಿ ಪಡೆಯಲು ಪ್ರಾರಂಭಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.


ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ ಪಾಸ್ವಾನ್, 2020 ರ ಜನವರಿ 1 ರಿಂದ ದೇಶದ 12 ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಗೋವಾ, ಜಾರ್ಖಂಡ್ ಮತ್ತು ತ್ರಿಪುರಗಳಲ್ಲಿ ಒಂದು ರಾಷ್ಟ್ರ  'ಪಡಿತರ ಕಾರ್ಡ್' ಸೌಲಭ್ಯ ಪ್ರಾರಂಭವಾಗಿದೆ ಎಂದು ಹೇಳಿದರು.


ಈ ರಾಜ್ಯಗಳ ಪಿಡಿಎಸ್ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಫಲಾನುಭವಿಗಳು ಈ ಯಾವುದೇ ರಾಜ್ಯಗಳಲ್ಲಿ ವಾಸಿಸುವಾಗ ತಮ್ಮ ಅಸ್ತಿತ್ವದಲ್ಲಿರುವ ಪಡಿತರ ಚೀಟಿಯಿಂದಲೇ ತಮ್ಮ ಪಾಲಿನ ಪಡಿತರವನ್ನು ಪಡೆಯಬಹುದು ಎಂದು ಅವರು ಹೇಳಿದರು. ಜೂನ್ 2020 ರ ವೇಳೆಗೆ ದೇಶದ ಎಲ್ಲಾ ರಾಜ್ಯಗಳು ಇದರೊಂದಿಗೆ ಸಂಪರ್ಕ ಹೊಂದುತ್ತವೆ ಎಂದವರು ತಿಳಿಸಿದರು.


ಏನಿದು 'ಒನ್ ನೇಷನ್ ಒನ್ ರೇಷನ್ ಕಾರ್ಡ್'?
'ಒನ್ ನೇಷನ್ ಒನ್ ರೇಷನ್ ಕಾರ್ಡ್' ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಪಿಡಿಎಸ್‌ನ ಫಲಾನುಭವಿಗಳು ದೇಶದ ಎಲ್ಲಿಯಾದರೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಪಡಿತರ ಅಂಗಡಿಗಳಿಂದ ತಮ್ಮ ಪಾಲಿನ ಪಡಿತರವನ್ನು ಪಡೆಯುತ್ತಾರೆ. ಈ ಯೋಜನೆಯಡಿ, ಪಿಡಿಎಸ್‌ನ ಫಲಾನುಭವಿಗಳನ್ನು ತಮ್ಮ ಆಧಾರ್ ಕಾರ್ಡ್‌ನಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಸಾಧನದೊಂದಿಗೆ ಗುರುತಿಸಲಾಗುತ್ತದೆ. ಇದರಲ್ಲಿ ಫಲಾನುಭವಿಗಳಿಗೆ ಸಂಬಂಧಿಸಿದ ವಿವರಗಳನ್ನು ನೀಡಲಾಗುತ್ತದೆ.


ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಕೇಂದ್ರ ಸರ್ಕಾರವು ಆಹಾರ ಧಾನ್ಯಗಳನ್ನು ಒದಗಿಸುತ್ತದೆ.


ಮತ್ತೊಂದೆಡೆ, ಶೀಘ್ರದಲ್ಲೇ ರಾಷ್ಟ್ರೀಯ ಪೋರ್ಟಬಿಲಿಟಿ ಸಹ ಜಾರಿಗೆ ತರಲಾಗುವುದು ಎಂದು ರಾಜಸ್ಥಾನದ ಆಹಾರ ಸಚಿವ ರಮೇಶ್ ಚಂದ್ ಮೀನಾ ಹೇಳಿದ್ದಾರೆ. ಇದರ ಅಡಿಯಲ್ಲಿ ದೇಶದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಯಾವುದೇ ಫಲಾನುಭವಿಗಳು ದೇಶದ ಯಾವುದೇ ರಾಜ್ಯದ ಪಡಿತರ ಅಂಗಡಿಯಿಂದ ಗೋಧಿ ಅಥವಾ ಇತರ ವಸ್ತುಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ.