ನವದೆಹಲಿ:  ಭಾರತೀಯ ಶಿಬಿರವನ್ನು ಗುರಿಯಾಗಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನ ಸೇನೆ ಭಾನುವಾರ ರಾತ್ರಿ 10.30 ರ ಸುಮಾರಿಗೆ ಪೂಂಚ್ ಜಿಲ್ಲೆಯ ಬಾಲಕೋಟ್ ಸೆಕ್ಟರ್‌ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಭದ್ರತಾ ಪಡೆಗಳೂ ತಕ್ಕ ಉತ್ತರ ನೀಡಿವೆ. ರಾತ್ರಿಯಿಡೀ ಈ ಗುಂಡಿನ ಕಾಳಗ ನಡೆದಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಈ ವರ್ಷ ಪಾಕಿಸ್ತಾನ 2,050 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಭಾರತ ಭಾನುವಾರ ಹೇಳಿದೆ.  ಇದರಲ್ಲಿ 21 ಭಾರತೀಯರು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ಪಾಕಿಸ್ತಾನವು ಭಾರತದ ಗಡಿಯಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸುತ್ತಿದೆ ಎಂಬ ವರದಿಗಳಿವೆ. 2003 ರ ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿರಲು ಮತ್ತು ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಭಾರತವು ಪಾಕಿಸ್ತಾನಕ್ಕೆ ಪದೇ ಪದೇ ಕರೆ ನೀಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಗಡಿಯುದ್ದಕ್ಕೂ ಗರಿಷ್ಠ ನಿಗ್ರಹ ಮತ್ತು ಒಳನುಸುಳುವಿಕೆ ಹಾಗೂ ಅಪ್ರಚೋದಿತ ಉಲ್ಲಂಘನೆಗಳಿಗೆ ಭಾರತೀಯ ಪಡೆಗಳು ಸರಿಯಾದ ಪ್ರತಿಕ್ರಿಯೆ ನೀಡುತ್ತಿದೆ ಎಂದು ಅವರು ಹೇಳಿದರು.


ಗಡಿಯುದ್ದಕ್ಕೂ ಭಯೋತ್ಪಾದಕರ ಒಳನುಸುಳುವಿಕೆಯನ್ನು ಬೆಂಬಲಿಸುವುದು ಮತ್ತು ಭಾರತೀಯ ನಾಗರಿಕರು ಮತ್ತು ಗಡಿ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಳ್ಳುವುದು ಪಾಕ್ ಉದ್ದೇಶವಾಗಿದ್ದು, ಪಾಕಿಸ್ತಾನ ಪಡೆಗಳ ಕದನ ವಿರಾಮ ಉಲ್ಲಂಘನೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಪಾಕಿಸ್ತಾನ ಸೇನೆಯು ತನ್ನ ಇಬ್ಬರು ಪಂಜಾಬಿ ಜವಾನರ ಶವಗಳನ್ನು ಪಡೆದ ನಂತರ ಈ ಹೇಳಿಕೆ ಬಂದಿದೆ.


ಪಾಕಿಸ್ತಾನದ ಕಡೆಯಿಂದ ಕದನ ವಿರಾಮ ಉಲ್ಲಂಘನೆ (ಸಿಎಫ್‌ವಿ) ಗೆ ಪ್ರತೀಕಾರವಾಗಿ ಭಾರತೀಯ ಸೇನೆಯಿಂದ ಮೃತಪಟ್ಟ ತನ್ನ ಸೈನಿಕರ ದೇಹವನ್ನು ಪಡೆಯಲು ಪಾಕಿಸ್ತಾನ ಸೇನೆಯು ಬಿಳಿ ಧ್ವಜವನ್ನು ಎತ್ತಬೇಕಾಯಿತು. ಈ ಬಿಳಿ ಧ್ವಜವು ಶರಣಾಗತಿಯನ್ನು ಸೂಚಿಸುತ್ತದೆ ಅಥವಾ ಒಪ್ಪಂದವನ್ನು ಬಯಸುತ್ತದೆ.


ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಹಾಜಿಪುರ ಸೆಕ್ಟರ್‌ನಲ್ಲಿ ಸೆಪ್ಟೆಂಬರ್ 10-11 ರಂದು ಭಾರತೀಯ ಸೇನಾ ಪಡೆಗಳು ಸಿಪಾಯ್ ಗುಲಾಮ್ ರಸೂಲ್ ಅವರನ್ನು ಹತ್ಯೆಗೈದವು ಇವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್ ನಗರದವರು ಎಂದು ಸೇನಾ ಮೂಲಗಳು ತಿಳಿಸಿವೆ.


ಕದನ ವಿರಾಮ ಉಲ್ಲಂಘನೆಯನ್ನು ತೀವ್ರಗೊಳಿಸುವ ಮೂಲಕ ಪಾಕಿಸ್ತಾನದ ಸೈನಿಕರು ದೇಹವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರು. ಆದರೆ  ಪಂಜಾಬಿ ಮುಸ್ಲಿಂ ಸೈನಿಕನನ್ನು ಪಡೆಯಲು ಯತ್ನಿಸುತ್ತಿದ್ದಾಗ, ಪಾಕಿಸ್ತಾನದ ಇನ್ನೊಬ್ಬ ಪಂಜಾಬಿ ಮುಸ್ಲಿಂ ಸೈನಿಕನನ್ನು ಹತ್ಯೆಗೈಯಲಾಯಿತು. ಸತತವಾಗಿ ಎರಡು ದಿನಗಳ ಕಲ ಪಾಕಿಸ್ತಾನ ಮೃತ ದೇಹಗಳನ್ನು ಪಡೆಯಲು ಯತ್ನಿಸಿದರು ಕೂಡ ಅವರಿಗೆ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.  ಈ ಹಿನ್ನಲೆಯಲ್ಲಿ ಪಾಕಿಸ್ತಾನವು ಸೆಪ್ಟಂಬರ್ 13 ರಂದು ಬಿಳಿ ಧ್ವಜವನ್ನು ಮೇಲೆಕ್ಕೆತ್ತಿ ಶವಗಳನ್ನು ವಶಪಡಿಸಿಕೊಂಡಿದೆ. ಭಾರತೀಯ ಸೇನೆಯು ಸತ್ತವರನ್ನು ಗೌರವಿಸುತ್ತದೆ ಮತ್ತು ಅದಕ್ಕೆ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.