`ಶಾಹೀನ್ ಬಾಗ್ ಜನರು ನಿಮ್ಮ ಮನೆಗೆ ನುಗ್ಗಿ ಹೆಣ್ಣುಮಕ್ಕಳ ಮೇಲೆ ರೇಪ್ ನಡೆಸುತ್ತಾರೆ`
ಈ ಕುರಿತು ಹೇಳಿಕೆ ನೀಡಿರುವ BJP ಸಂಸದ, `ಈ ಜನರು ನಿಮ್ಮ ಮನೆಗೆ ನುಗ್ಗಲಿದ್ದಾರೆ, ಹೆಣ್ಣುಮಕ್ಕಳನ್ನು ಅಪಹರಿಸಿ, ಅವರ ಮೇಲೆ ಅತ್ಯಾಚಾರ ಎಸಗಿ ಬಳಿಕ ಹತ್ಯೆಗೈಯಲಿದ್ದಾರೆ. ಇಂದು ನಿಮ್ಮ ಬಳಿ ಸಮಯವಿದೆ ಆದರೆ, ನಾಳೆ ಮೋದಿ ಕೂಡ ನಿಮ್ಮನ್ನು ಕಾಪಾಡಲು ಬರುವುದಿಲ್ಲ` ಎಂಬ ವಿವಾದಾತ್ಮಕ ಟಿಪ್ಪಣಿ ಮಾಡಿದ್ದಾರೆ.
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗಳ ದಿನಾಂಕ ಸಮೀಪಿಸುತ್ತಿದ್ದಂತೆ ರಾಜಕೀಯ ಮುಖಂಡರೂ ಕೂಡ ವಿವಾದಾತ್ಮಕ ಟಿಪ್ಪಣಿಗಳನ್ನು ನೀಡಲಾರಂಭಿಸಿದ್ದಾರೆ. ಅಷ್ಟೇ ಅಲ್ಲ ಇತರೆ ವಿಷಯಗಳನ್ನು ಬಿಟ್ಟು ಇದೀಗ ಮುಖಂಡರು ಶಾಹೀನ್ ಬಾಗ್ ಪ್ರತಿಭಟನೆಯ ಕಡೆಗೆ ಮುಖ ಮಾಡುತ್ತಿದ್ದಾರೆ. ಶಾಹೀನ್ ಬಾಗ್ ಹೋಲಿಕೆಯನ್ನು ಕಾಶ್ಮೀರ್ ಗೆ ಮಾಡಿರುವ BJP ಸಂಸದ ಪರ್ವೇಶ್ ವರ್ಮಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ANI ಸುದ್ದಿಸಂಸ್ಥೆಯ ಜೊತೆ ಮಾತನಾಡಿರುವ ಪರ್ವೇಶ್ ವರ್ಮಾ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಮ್ಮನ್ನು ಶಾಹೀನ್ ಬಾಗ್ ಬೆಂಬಲಿಗರು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಕೆಲ ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಹೊತ್ತಿ ಉರಿದ ಬೆಂಕಿ, ಕಾಶ್ಮೀರಿ ಪಂಡಿತರ ಹೆಣ್ಣುಮಕ್ಕಳ ಮೇಲೆ ನಡೆದ ರೇಪ್ ಬಳಿಕ ಉತ್ತರ ಪ್ರದೇಶ, ಕೇರಳ ಹಾಗೂ ಹೈದ್ರಾಬಾದ್ ವರೆಗೆ ಹರಡಿರುವುದು ದೆಹಲಿಯ ಜನರಿಗೆ ತಿಳಿದ ವಿಷಯವಾಗಿದೆ. ಇಂದು ಅದೇ ಬೆಂಕಿ ದೆಹಲಿಯ ಒಂದು ಮೂಲೆಗೆ ತಗುಲಿದೆ ಎಂದು ಹೇಳಿದ್ದಾರೆ.
ಕಾಶ್ಮೀರದ ಆ ಬೆಂಕಿ ಯಾವುದೇ ಸಂದರ್ಭದಲ್ಲಿಯೂ ಕೂಡ ದೆಹಲಿ ಜನರ ಮನೆಬಾಗಿಲಿಗೆ ತಲುಪಬಹುದು ಎಂದ ಪರ್ವೇಶ್ ವರ್ಮಾ, "ಈ ಜನರು ನಿಮ್ಮ ಮನೆಗೆ ನುಗ್ಗಲಿದ್ದಾರೆ, ಹೆಣ್ಣುಮಕ್ಕಳನ್ನು ಅಪಹರಿಸಿ, ಅವರ ಮೇಲೆ ಅತ್ಯಾಚಾರ ಎಸಗಿ ಬಳಿಕ ಹತ್ಯೆಗೈಯಲಿದ್ದಾರೆ. ಇಂದು ನಿಮ್ಮ ಬಳಿ ಸಮಯವಿದೆ ಆದರೆ, ನಾಳೆ ಮೋದಿ ಕೂಡ ನಿಮ್ಮನ್ನು ಕಾಪಾಡಲು ಬರುವುದಿಲ್ಲ" ಎಂದಿದ್ದಾರೆ.
"ದೆಹಲಿ ಜನತೆ ಇಂದೇ ಎಚ್ಚೆತ್ತುಕೊಂಡರೆ ಉತ್ತಮ. ಎಲ್ಲಿಯವರೆಗೆ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ ಅಲ್ಲಿಯವರೆಗೆ ದೇಶ ಸುರಕ್ಷಿತವಾಗಿದೆ. ಬೇರೆ ಯಾವುದೇ ಪ್ರಧಾನಿ ಅಧಿಕಾರಕ್ಕೆ ಬಂದರೆ ದೇಶದ ಜನತೆ ತಮ್ಮನ್ನು ತಾವು ಅಸುರಕ್ಷಿತ ಎಂದು ಭಾವಿಸಲಿದ್ದಾರೆ" ಎಂದು ವರ್ಮಾ ಹೇಳಿದ್ದಾರೆ.
ಸೋಮವಾರ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಪರ್ವೇಶ್ ವರ್ಮಾ, " ಬರುವ 11ನೇ ತಾರೀಖಿಗೆ ಒಂದು ವೇಳೆ ದೆಹಲಿಯಲ್ಲಿ BJP ಸರ್ಕಾರ ಅಧಿಕಾರಕ್ಕೆ ಬಂದಿದ್ದೆ ಆದಲ್ಲಿ, ಕೇವಲ ಒಂದು ಗಂಟೆಯಲ್ಲಿ ಶಾಹೀನ್ ಬಾಗ್ ತೆರವುಗೊಳಿಸಲಾಗುವುದು" ಅಷ್ಟೇ ಅಲ್ಲ, "ಕೇವಲ ಒಂದು ತಿಂಗಳಲ್ಲಿ ಸರ್ಕಾರಿ ಜಮೀನಿನ ಮೇಲೆ ನಿರ್ಮಿಸಲಾಗಿರುವ ಮಸೀದಿಗಳನ್ನು ತೆರವುಗೊಳಿಸಲಾಗುವುದು" ಎಂದಿದ್ದಾರೆ.