24 ಗಂಟೆಯಲ್ಲಿ ಅಯೋಧ್ಯೆ ಬಗೆ ಹರಿಯುವದಾದರೆ, 90 ದಿನಗಳಲ್ಲಿ ಬೆಳೆಯನ್ನು ರಕ್ಷಿಸಲಿ- ಯೋಗಿಗೆ ಅಖಿಲೇಶ್ ಸವಾಲ್
ಅಯೋಧ್ಯೆ ವಿವಾದವನ್ನು 24 ಗಂಟೆಯಲ್ಲಿ ಬಗೆ ಹರಿಸಬಹುದು ಎಂದು ಶನಿವಾರದಂದು ಹೇಳಿಕೆ ನೀಡಿದ್ದ ಸಿಎಂ ಯೋಗಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ` ಜನರು ಈಗ 90 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ,ಆದ್ದರಿಂದ ದನಕರುಗಳಿಂದ ಬೆಳೆಗಳನ್ನು ರಕ್ಷಿಸುವ ಕೆಲಸ ಮಾಡಲಿ` ಎಂದು ಸವಾಲು ಹಾಕಿದ್ದಾರೆ.
ನವದೆಹಲಿ: ಅಯೋಧ್ಯೆ ವಿವಾದವನ್ನು 24 ಗಂಟೆಯಲ್ಲಿ ಬಗೆ ಹರಿಸಬಹುದು ಎಂದು ಶನಿವಾರದಂದು ಹೇಳಿಕೆ ನೀಡಿದ್ದ ಸಿಎಂ ಯೋಗಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ " ಜನರು ಈಗ 90 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ,ಆದ್ದರಿಂದ ದನಕರುಗಳಿಂದ ಬೆಳೆಗಳನ್ನು ರಕ್ಷಿಸುವ ಕೆಲಸ ಮಾಡಲಿ" ಎಂದು ಸವಾಲು ಹಾಕಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್ " ರಾಮಮಂದಿರ ವಿಷಯವನ್ನು 24 ಘಂಟೆಗಳಲ್ಲಿ ಪರಿಹರಿಸಬಹುದಾದಲ್ಲಿ ನಾನು ಮುಖ್ಯಮಂತ್ರಿಗೆ ಹೇಳುವುದಿಷ್ಟೇ ಜನರು ಈಗ ಅವರಿಗೆ 90 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ. ಆದ್ದರಿಂದ, ರೈತರ ಬೆಳೆಗಳನ್ನು ದನಕರುಗಳಿಂದ ರಕ್ಷಿಸುವ ಕೆಲಸ ಮಾಡಲಿ, ರೈತರು ಮೊದಲ ಆಧ್ಯತೆಯಾಗಬೇಕೆಂದು ತಿಳಿಸಿದರು.
ಶನಿವಾರದಂದು ಸಿಎಂ ಯೋಗಿಗೆ ಅಯೋಧ್ಯೆ ವಿವಾದ ವಿಚಾರವಾಗಿ ಯಾವುದಾದರೂ ಮಾತುಕತೆ ನಡೆದಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸುತ್ತಾ "ನಾವು ಸುಪ್ರೀಂಗೆ ಮನವಿ ಮಾಡಿಕೊಳ್ಳುವುದಿಷ್ಟೇ ತೀರ್ಪನ್ನು ಬೇಗನೆ ನೀಡಿ ಲಕ್ಷಾಂತರ ಜನರನ್ನು ಸಂತೃಪ್ತಿಪಡಿಸಿ. ಏಕೆಂದರೆ ಇದು ಜನರ ನಂಬಿಕೆ ಸಂಕೇತ, ತೀರ್ಪಿನ ವಿಷಯದಲ್ಲಿ ಪದೇ ಪದೆ ವಿಳಂಭ ಮಾಡಿದಲ್ಲಿ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ "ಎಂದರು
ಇನ್ನು ಮುಂದುವರೆದು "ನಾನು ಹೇಳುವುದಿಷ್ಟೇ ತೀರ್ಪನ್ನು ಸುಪ್ರೀಂ ಬೇಗನೆ ನೀಡಬೇಕು ಇಲ್ಲದೇ ಹೋದಲ್ಲಿ ಈ ವಿಚಾರವನ್ನು ನಮಗೆ ಹಸ್ತಾಂತರಿಸಬೇಕು ನಾವು ಈ ರಾಮ ಜನ್ಮಭೂಮಿ ವಿವಾದವನ್ನು 24 ಘಂಟೆಯೊಳಗೆ ಬಗೆ ಹರಿಸುತ್ತೇವೆ" ಎಂದರು. ಇದೇ ವೇಳೆ ಈ ವಿಚಾರವಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಏಕೆ ತರುತ್ತಿಲ್ಲ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಯೋಗಿ "ಸಂಸತ್ತು ನ್ಯಾಯಾಲಯದ ಅಡಿಯಲ್ಲಿ ಇರುವ ವಿಷಯಗಳ ಕುರಿತಾಗಿ ಚರ್ಚಿಸುವುದಿಲ್ಲ ಇದನ್ನು ನಾವು ಕೋರ್ಟ್ ಗೆ ಬಿಟ್ಟಿದ್ದೇವೆ" ಎಂದು ತಿಳಿಸಿದರು.