ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಿಗ್ಗೆ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿಯಂತ್ರಣ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಚಂದ್ರಯಾನ್ -2 ಮಿಷನ್ ಬಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಪ್ರಧಾನಿ ಮೋದಿ ಅವರಿಗೆ ಬೀಳ್ಕೊಡಲು ಹೊರಬಂದ ಇಸ್ರೋ ಮುಖ್ಯಸ್ಥ ಕೆ. ಶಿವನ್ ಆ ಸಮಯದಲ್ಲಿ ತುಂಬಾ ಭಾವುಕರಾಗಿ ಕಣ್ಣೀರಿಟ್ಟರು. ಇಸ್ರೋ ಮುಖ್ಯಸ್ಥರು ಭಾವುಕರಾಗಿರುವುದನ್ನು ಗಮನಿಸಿದ ಪ್ರಧಾನಿ ಮೋದಿ ಅವರನ್ನು ಅಪ್ಪಿಕೊಂಡು ಬೆನ್ನು ತಟ್ಟಿ ಸಮಾಧಾನ ಪಡಿಸಿದರು.



COMMERCIAL BREAK
SCROLL TO CONTINUE READING

ಚಂದ್ರಯಾನ 2 ರ ಅಂತಿಮ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಶುಕ್ರವಾರ ತಡರಾತ್ರಿ ಪ್ರಧಾನಿ ಮೋದಿ ಅವರು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ್ದರು. ಪೀಣ್ಯದ ಇಸ್ರೊ ಕೇಂದ್ರದಲ್ಲಿ ಶನಿವಾರ ಚಂದ್ರಯಾನ-2 ವ್ಯೋಮ ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಯಂತೆ ಇಳಿದರೂ, ಸಂಪರ್ಕ ಕಳೆದುಕೊಂಡು ಅದರಿಂದ ಸಂದೇಶ ಬಾರದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಸಾಂತ್ವನದ ಮಾತುಗಳನ್ನು ಹೇಳಿದರು.


ಚಂದ್ರಯಾನ -2 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುವ ಕೊನೆಯ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡಿದ್ದು, ಐತಿಹಾಸಿಕ ಕ್ಷಣಕ್ಕೆ ಕುತೂಹಲದಿಂದ ಕಾಯುತ್ತಿದ್ದವರಿಗೆ ನಿರಾಸೆ ಉಂಟುಮಾಡಿದೆ. ಈ ಕುರಿತು ಇಂದು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಪೀಣ್ಯಾದ ಇಸ್ರೋ ಇಸ್ಟ್ರಾಕ್ ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ವಿಜ್ಞಾನಿಗಳ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ, ಭಾರತ ನಿಮ್ಮೊಂದಿಗಿದೆ. ನಿಮ್ಮ ಪರಿಶ್ರಮದ ಬಗ್ಗೆ ಭಾರತೀಯರೆಲ್ಲರಿಗೂ ಹೆಮ್ಮೆ ಇದೆ. ಅಡೆತಡೆಗಳಿಂದ ನಿಮ್ಮ ವಿಶ್ವಾಸ ಕುಗ್ಗಿಲ್ಲ, ಹೆಚ್ಚಾಗಿದೆ ಎಂದು ಇಸ್ರೋ ವಿಜ್ಞಾನಿಗಳನ್ನು ಶ್ಲಾಘಿಸಿದರು.


ಬಳಿಕ ಇಸ್ರೋ ಇಸ್ಟ್ರಾಕ್ ಕೇಂದ್ರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಹೊರಡುವ ಸಂದರ್ಭದಲ್ಲಿ ಬಾಗಿಲವರೆಗೂ ಜೊತೆಗೆ ಬಂದ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರ ಕಣ್ತುಂಬಿತ್ತು. ಈ‌ ಸಂದರ್ಭದಲ್ಲಿ ಶಿವನ್ ಅವರಿಗೆ ಪ್ರಧಾನಿ ಮೋದಿ ಅಪ್ಪುಗೆ ನೀಡಿ ಸಮಾಧಾನ ಪಡಿಸಿದರು.


ಇದಕ್ಕೂ ಮೊದಲು ಚಂದ್ರಯಾನ-2 ಬಗ್ಗೆ ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ವಿಜ್ಞಾನಿಗಳಿಗೆ ವಿಶ್ವಾಸ ತುಂಬಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, 'ಜೀವನದಲ್ಲಿ ಏರಿಳಿತಗಳು ಇದ್ದದ್ದೇ. ಸಂಪರ್ಕ ಕಡಿದುಕೊಂಡಾಗ ಎಲ್ಲರಿಗೂ ಬೇಸರವಾಗಿರುವುದನ್ನು ನಾನು ನೋಡಿದೆ. ಇದು ಕ್ಷುಲ್ಲಕ ಸಾಧನೆಯಲ್ಲ. ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ, ನಿಮ್ಮ ಕಠಿಣ ಪರಿಶ್ರಮ ನಮಗೆ ಬಹಳಷ್ಟು ಕಲಿಸಿದೆ. 'ಹೋಪ್ ಫಾರ್ ದಿ ಬೆಸ್ಟ್'. ನೀವು ದೇಶಕ್ಕೆ ಸೇವೆ ಸಲ್ಲಿಸಿದ್ದೀರಿ, ವಿಜ್ಞಾನ ಸೇವೆ ಮಾಡಿದ್ದೀರಿ, ಮಾನವಕುಲಕ್ಕೆ ಸೇವೆ ಸಲ್ಲಿಸಿದ್ದೀರಿ. ನಿಮ್ಮ ನಾಯಕತ್ವದಲ್ಲಿ ನಾವು ಸಾಧನೆ ಮಾಡಲಿದ್ದೇವೆ. ಸಂಪರ್ಕವನ್ನು ಮರುಸಂಪರ್ಕಿಸಿದ ತಕ್ಷಣ, ಅದು ಇನ್ನೂ ಹೆಚ್ಚಿನ ಸಾಧನೆಯಾಗುತ್ತದೆ ಎಂದು ನಾವು ಭಾವಿಸುತ್ತೇವೆ. ನಾನು ನಿಮ್ಮೆಲ್ಲರೊಂದಿಗಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ.