ಮುಂಬೈ: 2014ರ ಲೋಕಸಭಾ ಚುನಾವಣೆಗಿಂತ 2019ರ ಲೋಕಸಭಾ ಚುನಾವಣೆಯಲ್ಲಿ ಹೋರಾಡುವುದು ಬಹಳ ಸುಲಭವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಜೀ ನ್ಯೂಸ್ ಜೊತೆಗೆ ನಡೆಸಿದ ವಿಶೇಷ ಸಂಭಾಷಣೆ ಮಾತನಾಡಿದ ಮುಖ್ಯಮಂತ್ರಿ ಫಡ್ನವಿಸ್, ಈ ಬಾರಿ ಮಧ್ಯಮ ವರ್ಗದವರಿಗಿಂತ ಬಡ ವರ್ಗದವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹೆಚ್ಚು ಬೆಂಬಲ ನೀಡುತ್ತಿದ್ದಾರೆ. ಎನ್​ಡಿಎ 2014 ಕ್ಕಿಂತ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ಹೇಳಿದರು. 


COMMERCIAL BREAK
SCROLL TO CONTINUE READING

'ಶಿವಸೇನಾ-ಬಿಜೆಪಿ' ಸಹೋದರರಿದ್ದಂತೆ: 
ಪ್ರಧಾನಿ ನರೇಂದ್ರ ಮೋದಿ ಅವರು ಬಾಹುಬಲಿ ಇದ್ದಂತೆ ಎಂದು ಬಣ್ಣಿಸಿದ ದೇವೇಂದ್ರ ಫಡ್ನವೀಸ್, ಮೋದಿ ಅವರ ನಾಯಕತ್ವದಲ್ಲಿ ಎನ್​ಡಿಎ ಈ ಬಾರಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಈ ಬಿರು ಬಿಸಿಲಿನಲ್ಲಿ ಭಾರೀ ಪ್ರಮಾಣದಲ್ಲಿ ಜನಸಮೂಹ ಸೇರುತ್ತಿದೆ. ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಅವರಿಗೆ ಸಾರ್ವಜನಿಕರಿಂದ ಹೆಚ್ಚಿನ ಬೆಂಬಲವಿದೆ ಎಂದು ಹೇಳಿದರು.


ಇನ್ನು ಇದೇ ವೇಳೆ ಶಿವಸೇನೆ ಜೊತೆಗಿನ ಮೈತ್ರಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಫಡ್ನವೀಸ್, ಮೂರು ದಶಕಗಳಿಂದ ನಾವು ಜೊತೆಗಿದ್ದೇವೆ. ಮೂರು ವರ್ಷಗಳು ನಮ್ಮ ಮತ್ತು ಶಿವಸೇನೆ ನಡುವೆ ವೈಮನಸ್ಯ ಮೂಡಿತ್ತು. ಉದ್ಧವ್ ಠಾಕ್ರೆ ನೀಡುತ್ತಿದ್ದ ಹೇಳಿಕೆಗೆ ನಾವು ಪ್ರತಿಕ್ರಿಯೆ ನೀಡುತ್ತಿದ್ದೆವು. ಆದರೆ ಈಗ ಎಲ್ಲವೂ ಬಗೆಹರಿದಿದೆ. ನಾವಿಂದು ಸಹೋದರರಂತೆ ಇದ್ದು, ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದರು.


ಎನ್​ಡಿಎ ವಿರುದ್ಧ ರಾಜ್ ಠಾಕ್ರೆ ಪ್ರಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಫಡ್ನವಿಸ್, ಅವರ ಪಕ್ಷ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಎಲ್ಲಾ ಚುನಾವಣೆಗಳಲ್ಲೂ ಸೋಲುಂಡಿದೆ. ಪ್ರಧಾನಿ ಮೋದಿಯಿಂದಾಗಿ ಅವರ ರಾಜಕಾರಣದ ಅಂಗಡಿ ಮುಚ್ಚುತ್ತಿದೆ ಎಂಬ ಹತಾಶೆಯಿಂದ ರಾಜ್ ಠಾಕ್ರೆಯವರ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.